ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್ಸಿ) ಸದಸ್ಯ ಸ್ಥಾನನದಿಂದ ಅಮಾನತುಗೊಂಡಿದ್ದ ಮಂಗಳಾ ಶ್ರೀಧರ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆಂಬ ಆರೋಪದ ಮೇಲೆ ಕೆಪಿಎಸ್ಸಿ ಸದಸ್ಯೆಯಾಗಿದ್ದ ಮಂಗಳಾ ಶ್ರೀಧರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಂಗಳಾ ಶ್ರೀಧರ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ರು. ಇದೀಗ ಹೈಕೋರ್ಟ್ ಅಮಾನತು ಆದೇಶವನ್ನು ರದ್ದುಪಡಿಸಿದೆ. ಅಲ್ಲದೆ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದೆ.
ಏನಿದು ಪ್ರಕರಣ?: 2011ನೇ ಸಾಲಿನ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸದಸ್ಯೆ ಮಂಗಳಾ ಶ್ರೀಧರ್ 20 ಅಭ್ಯರ್ಥಿಗಳೊಂದಿಗೆ ನಿರಂತರವಾಗಿ ದೂರವಾಣಿ ಮಾತುಕತೆ ನಡೆಸಿದ್ದರು ಎಂಬ ಅಂಶ ಚಾರ್ಚ್ಶೀಟ್ ಮೂಲಕ ಬಯಲಾಗಿತ್ತು. ಕೆಪಿಎಸ್ಸಿ ಪರೀಕ್ಷೆಗಳು ನಡೆದ ನಂತರ ನೇಮಕಾತಿವರೆಗೆ ಅವರು 20 ಅಭ್ಯರ್ಥಿಗಳಿಗೆ ಸುಮಾರು 450 ಕರೆ ಮಾಡಿದ್ದಾರೆ ಎಂದು ಸಿಐಡಿ ಪೊಲೀಸರು ದಾಖಲಿಸಿರುವ ಚಾರ್ಚ್ಶೀಟ್ನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಮಂಗಳಾ ಶ್ರೀಧರ್ ಅವರ ಮೂವರು ಸಹಾಯಕರು ಇದಕ್ಕೆ ಸಹಕಾರ ನೀಡಿರುವ ಅಂಶವನ್ನು ಉಲ್ಲೇಖಿಸಿದ್ದರು. ಈ ಕಾರಣಕ್ಕಾಗಿ 2014ರಲ್ಲಿ ಮಂಗಳಾ ಶ್ರೀಧರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು.