ಬೆಂಗಳೂರು: ರಾಜ್ಯದ ಮಕ್ಕಳು ಓದುತ್ತಿರೋದು ಕ್ವಾಲಿಟಿ ಬುಕ್ ಅಲ್ಲ. ಗುಣಮಟ್ಟದ ಪಠ್ಯ ನೀಡುತ್ತಿದ್ದೇವೆ ಅಂತ ಬಡಾಯಿ ಕೊಚ್ಚಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ.
ರಾಜ್ಯ ಪಠ್ಯವನ್ನು ಕಳೆದ ವರ್ಷ ಪರಿಷ್ಕರಣೆ ಮಾಡಿದ್ದು, ಸರ್ಕಾರದ ಪುಸ್ತಕಗಳು ನಿಯಮದ ವಿರುದ್ಧವಾಗಿದೆ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ಆಂಡ್ ಟ್ರೈನಿಂಗ್ ಸಂಸ್ಥೆ (ಎನ್ಸಿಇಆರ್ ಟಿ) ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎರಡು ವರ್ಷಗಳ ಕಾಲ ನಡೆದ ಪಠ್ಯಪುಸ್ತಕ ಪರಿಷ್ಕರಣೆ ವ್ಯರ್ಥವಾಗಿದೆ.
ಎನ್ಸಿಇಆರ್ ಟಿ ಅಸಮಾಧಾನಕ್ಕೆ ಬೆಚ್ಚಿ ಬಿದ್ದಿರೋ ರಾಜ್ಯ ಸರ್ಕಾರ, ಗುಣಮಟ್ಟದ ಪಠ್ಯ ರಚನೆಗೆ ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. 6 ಪರಿಷತ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಬಿಜೆಪಿಯ ಅರುಣ್ ಶಹಾಪುರ ಸಮಿತಿ ಅಧ್ಯಕ್ಷರಾಗಿದ್ದಾರೆ. ಗುಣಮಟ್ಟದ ಶಿಕ್ಷಣದ ಅಂಶಗಳು, ಎನ್ಸಿಇಆರ್ ಟಿ ಪುಸ್ತಕ ಪರಿಶೀಲಿಸಿ, ಈ ಸಮಿತಿ ವರದಿ ನೀಡುತ್ತೆ. ಬಳಿಕ ಪಠ್ಯ ಪುಸ್ತಕದಲ್ಲಿ ಈ ಅಂಶಗಳನ್ನ ಸರ್ಕಾರ ಅಳವಡಿಸಲಿದೆ.
ವಿಪರ್ಯಾಸ ಅಂದ್ರೆ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕೃತಗೊಂಡ ಪಠ್ಯಪುಸ್ತಕವನ್ನು ಕಳೆದ ವರ್ಷ ಸರ್ಕಾರ ಅಳವಡಿಸಿಕೊಂಡಿತ್ತು. ಆದ್ರೆ ಇದೀಗ ರಾಜ್ಯದ ಪರಿಷ್ಕೃತ ಪಠ್ಯಕ್ಕೆ ಎನ್ ಸಿಇಆರ್ಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕದ ಮೌಲ್ಯದ ಮೇಲೆ ಅನುಮಾನ ಬೀಳುವಂತೆ ಮಾಡಿದೆ.