ಬೀದರ್: ಐದು ದಿನಗಳಿಂದ ಕಾಣೆಯಾಗಿದ್ದ ಪಿಡಿಓ ಮೃತದೇಹ ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣ ಖೇಡ್ ತಾಲೂಕಿನ ರಾಯಕೋಡ್ ಸೇತುವೆ ಬಳಿ ಇಂದು ಪತ್ತೆಯಾಗಿದೆ.
ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯತಿ ಪಿಡಿಓ ರಮೇಶ್(32) ಅವರ ಮೃತದೇಹ ರಾಯಕೋಡ್ ಸೇತುವೆ ಬಳಿ ಇಂದು ಪತ್ತೆಯಾಗಿದ್ದು, ಇವರು ಐದು ದಿನಗಳಿಂದ ಕಾಣೆಯಾಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ರಮೇಶ್ ಅವರ ಪತ್ನಿ ಮೂರು ದಿನಗಳ ಹಿಂದೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದುರಾದೃಷ್ಟವಶಾತ್ ರಮೇಶ್ ಅವರು ಶವವಾಗಿ ಕುಟುಂಬಕ್ಕೆ ಸಿಕ್ಕಿದ್ದಾರೆ. ಈಗ ಅವರ ಸಾವಿನ ಕಾರಣ ಏನು ಎಂಬುದು ಮಾತ್ರ ನಿಗೂಢವಾಗಿದೆ. ಈ ಸುದ್ದಿ ತಿಳಿದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ನಂತರ ಈ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಸಿಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ
ಬೀದರ್ ನ ಅಗ್ರಿಕಲ್ಚರ್ ಕಾಲೋನಿಯ ನಿವಾಸಿಯಾಗಿದ್ದ ರಮೇಶ್ ಅವರು ಪ್ರತಿದಿನ ಔರಾದ್ ತಾಲೂಕಿನ ನ ಜಂಬಗಿ ಪಂಚಾಯತಿಗೆ ಹೋಗಿ ಬಂದು ಮಾಡುತ್ತಿದ್ದರು. ಆದರೆ ಈ ರೀತಿ ಅಚಾನಕ್ಕಾಗಿ ಅವರು ಸಾವನ್ನಪ್ಪಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದ್ದು, ಈ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.