ಬೆಂಗಳೂರು: ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿರೋದು ಗೊತ್ತೇ ಇದೆ. ಚಿತ್ರೀಕರಣ ಶುರುವಾದಂದಿನಿಂದ ಇದುವರೆಗೂ ಈ ಚಿತ್ರದ ಕಡೆಯಿಂದ ಪ್ರೇಕ್ಷಕರಿಗೆ ಹಬ್ಬವಾಗುವಂಥಾದ್ದೇ ಸುದ್ದಿಗಳು, ಬೆಳವಣಿಗೆಗಳು ಜಾಹೀರಾಗುತ್ತಾ ಬಂದಿವೆ. ಆದರೀಗ ಈ ಚಿತ್ರದ ಬಹು ಮುಖ್ಯ ಭಾಗವಾಗಿದ್ದವರೊಬ್ಬರು ಚಿತ್ರತಂಡದಿಂದ ಹೊರಬಿದ್ದ ಸುದ್ದಿ ಬಂದಿದೆ!
ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿಯೂ ಹೆಸರು ಮಾಡಿದ್ದವರು ಭುವನ್ ಗೌಡ. ಆ ನಂತರ ಅವರು ರಥಾವರ ಚಿತ್ರದಲ್ಲಿಯೂ ಶ್ರೀಮುರಳಿಯವರಿಗೆ ಸಾಥ್ ನೀಡಿದ್ದರು. ಇದೀಗ ಭರಾಟೆ ಚಿತ್ರದ ಮೂಲಕ ಭುವನ್ ಮತ್ತು ಶ್ರೀಮುರಳಿ ಕಾಂಬಿನೇಷನ್ ಮೂರನೇ ಸಲ ಒಂದಾಗಿತ್ತು. ಆದರೆ ಒಂದಷ್ಟು ಕಾಲ ಚಿತ್ರೀಕರಣ ನಡೆಸಿದ ನಂತರ ಇದೀಗ ಭುವನ್ ಗೌಡ ಏಕಾಏಕಿ ಈ ಚಿತ್ರದಿಂದ ಹೊರ ಬಂದಿದ್ದಾರೆನ್ನಲಾಗಿದೆ.
ಛಾಯಾಗ್ರಾಹಕರೊಬ್ಬರು ಚಿತ್ರೀಕರಣ ಶುರುವಾದ ಮೇಲೆ ಹೊರ ಬಂದರೆ ಸಹಜವಾಗಿಯೇ ಅಚ್ಚರಿಯುಂಟಾಗುತ್ತದೆ. ಅದರ ಸುತ್ತ ರೂಮರ್ಗಳೂ ಶುರುವಾಗುತ್ತವೆ. ಅಂಥಾದ್ದೇ ಒಂದು ರೂಮರನ್ನು ಆಧರಿಸಿ ಹೇಳೋದಾದರೆ ಭುವನ್ ಗೌಡ ಮತ್ತು ನಿರ್ದೇಶಕ ಚೇತನ್ ಅವರ ನಡುವಿನ ವೈಮನಸ್ಸೇ ಈ ಬೆಳವಣಿಗೆಗೆ ಕಾರಣ ಎಂದೂ ಹೇಳಲಾಗುತ್ತಿದೆ.
ಇದೆಲ್ಲದರ ಹಿಂದಿರೋ ಅಸಲೀ ವಿಚಾರ ಏನೆಂಬುದನ್ನು ಚಿತ್ರ ತಂಡವೇ ಹೇಳಬೇಕಿದೆ. ಆದರೆ ಭುವನ್ ಗೌಡ ಹೊರ ಬಂದಿರೋ ಸುದ್ದಿ ನಿಜಕ್ಕೂ ಶಾಕಿಂಗ್. ಯಶ್ ನಟಿಸಿರೋ ಕೆಜಿಎಫ್ನಂಥಾ ಚಿತ್ರಗಳಿಗೂ ಕ್ಯಾಮೆರಾ ಕಣ್ಣಾಗಿರುವ ಭುವನ್ ಗೌಡ ಬಹು ಬೇಡಿಕೆ ಹೊಂದಿರುವವರು. ಇಂಥವರು ಚಿತ್ರತಂಡದಿಂದ ಹೊರ ಬಿದ್ದ ಘಟನೆಯ ಸುತ್ತ ವಿನಾ ಕಾರಣ ಸುದ್ದಿಗಳು ಹರಡಿಕೊಳ್ಳುವ ಮೊದಲೇ ಚಿತ್ರ ತಂಡ ಇದರ ಹಿಂದಿನ ವಾಸ್ತವ ವಿಚಾರಗಳನ್ನು ಹೊರ ಹಾಕ ಬಹುದೇನೋ…?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv