ಕೋಲ್ಕತ್ತಾ: ಕಚ್ಚಾ ಬಾದಾಮ್ ಹಾಡನ್ನು ಹಾಡುವ ಮೂಲಕ ಫೇಮಸ್ ಆದ ಭುಬನ್ ಬಡ್ಯಾಕರ್ ಕೆಲವು ದಿನಗಳ ಹಿಂದೆ ನಾನು ಸೆಲೆಬ್ರಿಟಿಯಾಗಿದ್ದೇನೆ. ಹಾಗಾಗಿ ಕಡಲೆಕಾಯಿ ಮಾರಾಟ ಮಾಡುವ ತಮ್ಮ ಹಳೆಯ ಕೆಲಸಕ್ಕೆ ಹಿಂದಿರುಗುವುದಿಲ್ಲ ಎಂದಿದ್ದರು. ಆದರೀಗ ನಾನು ಕಡಲೆಕಾಯಿ ಮಾರಾಟ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭುಬನ್ ಬಡ್ಯಾಕರ್ ತಾವು ಖರೀದಿಸಿದ್ದ ಸೆಕೆಂಡ್ ಹ್ಯಾಂಡ್ ಕಾರನ್ನು ಓಡಿಸಲು ಕಲಿಯುತ್ತಿದ್ದ ವೇಳೆ ಗಾಯಗೊಂಡು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಗುಣಮುಖರಾಗಿರುವ ಭುಬನ್ ಬಡ್ಯಾಕರ್ ಇತ್ತೀಚೆಗೆ ಬೋಲ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಕಡಲೆಕಾಯಿ ಮಾರಾಟ ಮಾಡುವ ಕೆಲಸವನ್ನು ಬಿಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?
ನಾನು ಕಡಲೆಕಾಯಿ ಮಾರಾಟ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಏಕೆಂದರೆ ಅದು ನನ್ನ ಕುಟುಂಬಕ್ಕೆ ಆಹಾರ ಮತ್ತು ಬಟ್ಟೆಗಳನ್ನು ನೀಡಿದೆ. ನನ್ನ ಕೆಲಸ ನನಗೆ ಪವಿತ್ರವಾದದ್ದು, ಆದ್ದರಿಂದ ನಾನು ಅದನ್ನು ಬಿಡುವುದಿಲ್ಲ. ನಾನು ಸರಳ ವ್ಯಕ್ತಿ ಮತ್ತು ನಾನು ಸರಳವಾಗಿ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನಿಮಗೆ ಲಭಿಸಿರುವ ಖ್ಯಾತಿ ಕಡಲೆಕಾಯಿ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಜನರ ಬೆಂಬಲ ಇರುವವರೆಗೆ, ಕಡಲೆಕಾಯಿ ಮಾರಾಟ ಮಾಡಲು ಹಳ್ಳಿಗಳಿಗೆ ಹೋಗಲು ನನಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು