– ಆರೋಪಿಗಳ ಪತ್ತೆಗೆ 4 ತಂಡ ರಚನೆ
ಬೆಂಗಳೂರು: ಎಲ್ಲರೂ ಇಂದು ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ರು. ಪೂಜೆಗೆ ಅಂತ ಅಕ್ಕಪಕ್ಕದ ಮನೆಯವ್ರನ್ನ ಕರೆದುಕೊಂಡು ಹೆಣ್ಮಕ್ಕಳು ಓಡಾಡ್ತಿದ್ರು. ಈ ವೇಳೆ ಓರ್ವ ಜೋರಾಗಿ ಕಿರುಚುಕೊಂಡು ನಡು ರಸ್ತೆಗೆ ಓಡೋಡಿ ಬಂದಿದ್ದ. ಅಷ್ಟರಲ್ಲೇ ಮನೆಯಲ್ಲಿದ್ದ ಜನ ಎಲ್ಲಾ ಜಮಾಯಿಸಿದ್ರು. ಪೊಲೀಸರಿಗೆ ವಿಚಾರ ತಿಳಿದು ಸ್ಪಾಟ್ಗೆ ಬಂದಿದ್ರು. ಹಬ್ಬದ ಮೂಡ್ನಲ್ಲಿದ್ದ ಜನರಿಗೆ ಡಬಲ್ ಮರ್ಡರ್ ಪದ ಕಿವಿಗಪ್ಪಳಿಸಿತ್ತು.
ಹೌದು. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿ ನಗರದಲ್ಲಿ ವೃದ್ಧ ದಂಪತಿಯ ಕೊಲೆ ನಡೆದಿದೆ. ಮೃತರನ್ನು ಪ್ರೇಮಲತಾ(61) ಶಾಂತರಾಜ್ ( 65) ಎಂದು ಗುರುತಿಸಲಾಗಿದೆ. ಶಾಂತ ರಾಜ್ ಬಿಎಂಟಿಸಿಯಲ್ಲಿ ಮೆಕಾನಿಕ್ ಆಗಿ ಸೇವೆ ಮಾಡಿದ್ದು ನಿವೃತ್ತಿ ಹೊಂದಿದ್ರು. ಇವರಿಗೆ ಎರಡು ಬಾಡಿಗೆ ಮನೆಯಿದ್ದು, ಬಂದ ಹಣದಲ್ಲಿ ದಂಪತಿ ಜೀವನ ನಡೆಸುತ್ತಿದ್ದರು. ದಂಪತಿಗೆ ಮಕ್ಕಳಿಲ್ಲವಾದ್ರು ಅನ್ಯೋನ್ಯವಾಗಿದ್ರು. ಹೀಗಿರುವಾಗ ಇಂದು ಮಧ್ಯಾಹ್ನ ದಂಪತಿ ಮನೆಗೆ ಬಂದ ಪರಿಚಿತ ಹಂತಕರು ಜೊತೆಯಲ್ಲೇ ಕಾಫಿ ಕುಡಿದು ಹರಟೆ ಹೊಡೆದಿದ್ದಾರೆ. ವೃದ್ಧೆ ಪ್ರೇಮಲತಾ ಕುತ್ತಿಗೆಗೆ ಕೇಬಲ್ ಬಿಗಿದು ಹತ್ಯೆ ಮಾಡಿದ್ದು, ಶಾಂತರಾಜುಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. 2 ಪ್ರತ್ಯೇಕ ರೂಮಿನಲ್ಲಿ ಮೃತದೇಹಗಳು ಪತ್ತೆಯಾಗಿದೆ. ಕೃತ್ಯದ ವೇಳೆ ತಪ್ಪಿಸಿಕೊಳ್ಳಲು ವೃದ್ಧ ದಂಪತಿ ಯತ್ನಿಸಿದ್ದು, ದಿಂಬಿನಿಂದ ಮುಖ ಮುಚ್ಚಿ ಕೊಲೆಗೈಯಲಾಗಿದೆ. ಇದನ್ನೂ ಓದಿ: ಕಾಬೂಲ್ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್ಲಿಫ್ಟ್ ಸಾಧ್ಯತೆ
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಮಿಷನರ್ ಕಮಲ್ ಪಂಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಮನೆಯಲ್ಲಿ ಪರಿಶೀಲಿಸಿದ ಬಳಿಕ ಮಾತನಾಡಿದ ಕಮಿಷನರ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಲ್ಕು ತಂಡ ರಚನೆ ಮಾಡಿ ತನಿಖೆ ನಡೆಸಲು ಸೂಚಿಸಿದ್ದೇನೆ. ಮನೆಯಲ್ಲಿ ಅಲ್ಮೆರಾ ಓಪನ್ ಆಗಿದೆ. ಇವರು ಅಷ್ಟೂ ಏನೂ ಶ್ರೀಮಂತರಲ್ಲ. ಮನೆಯೊಳಗಿನ ದೃಶ್ಯ ನೋಡಿದ್ರೆ ಯಾರೋ ಗೊತ್ತಿರುವವರೇ ಮಾಡಿದ್ದಾರೆ. ಎಫ್ ಎಸ್ ಎಲ್ ಮತ್ತು ಡಾಗ್ ಸ್ಕ್ವಾಡ್ ನಿಂದ ಎವಿಡೆನ್ಸ್ ಕಲೆಕ್ಟ್ ಮಾಡಲಾಗುತ್ತಿದೆ. ಇಬ್ಬರೇ ಮನೆಯಲ್ಲಿದ್ರು, ಅವರ ರಿಲೇಟಿವ್ಸ್ ಬಳಿಯೂ ಮಾಹಿತಿ ಕಲೆ ಹಾಕ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧನ ಮಾಡ್ತೀವಿ ಅಂತ ಹೇಳಿದ್ರು.
ಸದ್ಯ ಕೆಎಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಜೊತೆಗೆ ಮೃತ ವೃದ್ದ ದಂಪತಿಯ ಸಂಬಂದಿಕರನ್ನ ಸಂಪರ್ಕಿಸಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಲಿದ್ದಾರೆ. ಅದೇನೇ ಇರಲಿ ಹಾಡುಹಗಲೇ ಹಬ್ಬದ ದಿನ ಜನಸಂದಣಿ ಇರೋ ಸ್ಥಳದಲ್ಲೇ ಜೋಡಿ ಕೊಲೆ ಆಗಿರೋದು ಸ್ಥಳೀಯರಿಗೆ ಭಯವನ್ನುಂಟು ಮಾಡಿದೆ.