ಬೆಂಗಳೂರು: ಹುಟ್ಟುಹಬ್ಬವನ್ನು ಆಚರಿಸಿ ನಗರದಲ್ಲಿ ಕೆಲಸ ಮಾಡುತ್ತಿದ್ದ ಕಂಪೆನಿಯ 10ನೇ ಮಹಡಿಯಿಂದ ಗೋವಾ ಮೂಲದ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ಸಿಕ್ಕಿದೆ.
ಮಗಳು ಗೀತಾಂಜಲಿಯ ಶವ ಪಡೆಯಲು ಗೋವಾದಿಂದ ಪೋಷಕರು ಬೆಂಗಳೂರಿಗೆ ಬಂದಿದ್ದ ವೇಳೆ ಮಾರತ್ತಹಳ್ಳಿ ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಗೋವಾದಲ್ಲಿರುವ ನಮ್ಮ ಮನೆಗೆ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಬಂದಿದ್ದಳು. ಹುಟ್ಟುಹಬ್ಬದ ದಿನವಾದ ಮಂಗಳವಾರ ಗೀತಾಂಜಲಿಗೆ ನಾವು ನಿಶ್ಚಿತಾರ್ಥ ಮಾಡಿದ್ದೆವು. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಆದರೂ ವಿವಾಹ ನಿಶ್ಚಯಕ್ಕೆ ನಾವು ಬಲವಂತವಾಗಿ ಆಕೆಯನ್ನು ಒಪ್ಪಿಸಿದ್ದೆವು. ನಮ್ಮ ನಿರ್ಧಾರದಿಂದ ಆಕೆ ಮನನೊಂದಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಗೀತಾಂಜಲಿ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
27 ವರ್ಷದ ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಮ್ಮನ ಜೊತೆ ಎಚ್ಎಚ್ಎಸ್ಆರ್ ಲೇಔಟ್ ನಲ್ಲಿ ವಾಸವಾಗಿದ್ದ ಗೀತಾಂಜಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ ಮಧ್ಯಾಹ್ನ 12.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.