ಬೆಂಗಳೂರು: ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಜೆಪಿ ನಗರ ಮೊದಲನೆ ಹಂತದಲ್ಲಿ ನಡೆದಿದೆ.
ಸುನಿಲ್ ಕುಮಾರ್ (33) ಕೊಲೆಯಾದ ವ್ಯಕ್ತಿ. ಇವರು ಶನಿವಾರ ತಡರಾತ್ರಿ ಕೆಲ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಟಲ್ ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸುನಿಲ್ ಪಂಪ್ ಹೌಸ್ ಪಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡಿ ತಡರಾತ್ರಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಇಬ್ಬರು ಅಡ್ಡಗಟ್ಟಿದ್ದಾರೆ. ಅಲ್ಲದೆ ಸುನಿಲ್ ಮೇಲೆ ಬಾಟಲಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಸುನಿಲ್ ಬಲಗಾಲಿನ 4 ಜಾಗದಲ್ಲಿ ಅನೇಕ ಬಾರಿ ಬಾಟಲಿನಿಂದ ಇರಿದಿದ್ದಾರೆ.
ಬಾಟಲ್ನಿಂದ ಇರಿದ ರಭಸಕ್ಕೆ ಸುನಿಲ್ ಕಾಲಿನ ನರವೇ ಕಟ್ ಆಗಿದೆ. ಆ ನಂತರ ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಸುನಿಲ್ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.