ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್ಪಿ) ಹಾಗೂ ವಿಪಕ್ಷ ನಾಯಕನ ಸ್ಥಾನದಲ್ಲಿ ಅವರನ್ನೇ ಮುಂದುವರಿಸುವಂತೆ ಹೈಕಮಾಂಡ್ ಮನವೊಲಿಕೆಗೆ ಸಿದ್ದರಾಮಯ್ಯ ಬೆಂಬಲಿಗರು ಜನವರಿ 4ರ ನಂತರ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸುವ ಇಚ್ಚೆ ವ್ಯಕ್ತಪಡಿಸಿದರೆ ಗೌರವ ವಿದಾಯದ ಪ್ರಪೋಸಲ್ ಮುಂದಿಡಲು ಸಿದ್ದರಾಮಯ್ಯ ಬಣ ಮುಂದಾಗಿದೆ.
ಕಳೆದ 11 ವರ್ಷದಿಂದ ರಾಜ್ಯದಲ್ಲಿ ಪಕ್ಷದ ಹಿತ ಕಾಯ್ದಿದ್ದಾರೆ. ಅವರಿಗೆ ಗೌರವದ ವಿದಾಯ ಬೇಕು ಅನ್ನೋದು ಈ ಹೊಸ ಅಸ್ತ್ರ. ಅಂದರೆ 73 ವರ್ಷದ ಸಿದ್ದರಾಮಯ್ಯಗೆ ಮುಂದಿನ ಮೂರೂವರೆ ವರ್ಷದ ನಂತರ 76 ವರ್ಷ ಕಳೆದಿರುತ್ತದೆ. ಆಗಿನ ರಾಜಕೀಯ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡರಲ್ಲೂ ಮುಂದಿನ ಮೂರೂವರೆ ವರ್ಷಗಳ ಕಾಲ ಅವರನ್ನೇ ಮುಂದುವರಿಸಿ. ಆ ಮೂಲಕ ಸಿದ್ದರಾಮಯ್ಯರಂತ ವರ್ಚಸ್ವಿ ನಾಯಕನಿಗೆ ರಾಜಕಾರಣದಲ್ಲಿ ಗೌರವದ ವಿದಾಯವಾದರು ಸಿಗಲಿ ಅನ್ನೋದು ಸಿದ್ದರಾಮಯ್ಯ ಬೆಂಬಲಿಗರ ವಾದವಾಗಿದೆ.
ಸಿದ್ದರಾಮಯ್ಯ ಬೆಂಬಲಿಗರ ಈ ಸೆಂಟಿಮೆಂಟ್ ಅಸ್ತ್ರಕ್ಕೆ ಕೈ ಹೈಕಮಾಂಡ್ ಮಣೆ ಹಾಕುತ್ತಾ?, ಅಥವಾ ಖಡಕ್ ನಿರ್ಧಾರ ಕೈಗೊಳ್ಳುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.