– ನಮಗಾಗಿ ದೇಶ ದೇಶಕ್ಕಾಗಿ ನಾವು
ಬೆಂಗಳೂರು: ಬುಧವಾರ ಬೆಂಗಳೂರಿನ ಸಂಜಯ್ ನಗರದಲ್ಲಿ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದನ್ನು ನೋಡಿದ ನಟ ಶಿವರಾಜ್ ಕುಮಾರ್ ಅವರು ಬೇಸರಗೊಂಡು ವಿಡಿಯೋವೊಂದನ್ನು ಮಾಡಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಜಾಸ್ತಿಯಾಗುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ಏಪ್ರಿಲ್ 14ರವರೆಗೆ ಲಾಕ್ಡೌನ್ ಮಾಡಿದ್ದಾರೆ. ಈ ವೇಳೆ ರೋಡಿಗಿಳಿದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿದ್ದರು. ಈ ವಿಚಾರವನ್ನು ಟಿವಿಯಲ್ಲಿ ನೋಡಿ ಬೇಸರಗೊಂಡಿರುವ ಶಿವಣ್ಣ ವಿಡಿಯೋ ಮಾಡಿ ಈ ರೀತಿ ಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನೆನ್ನೆ ಟಿವಿಯಲ್ಲಿ ಪೊಲೀಸ್ ರವರ ಮೇಲೆ ಹಲ್ಲೆ ನಡೆದ ದೃಶ್ಯ ನೋಡಿ ಬೇಸರದಲ್ಲಿ ಈ ವಿಡಿಯೋ ಮಾಡಿದೆ. ಮನೆಯಲ್ಲೆ ಇದ್ದು ಸಹಕರಿಸಿ ???????? pic.twitter.com/QduVvFaOpc
— DrShivaRajkumar (@NimmaShivanna) March 26, 2020
ಪೊಲೀಸರ ಹಲ್ಲೆಯನ್ನು ಖಂಡಿಸಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ನಾನು ಟಿವಿ ನೋಡುತ್ತಿದ್ದೆ. ಈ ವೇಳೆ ಪೊಲೀಸರ ಮೇಲೆ ಕೈ ಮಾಡಿದ್ದನ್ನು ನೋಡಿದೆ. ಅದು ತುಂಬಾನೇ ತಪ್ಪು ಎಂಬುದು ನನ್ನ ಭಾವನೆ. ಪೊಲೀಸರು ನಮಗಾಗಿ ಹಾಗೂ ಈಗ ಇರು ಪರಿಸ್ಥಿತಿಗಾಗಿ ಹೀಗೆ ಮಾಡುತ್ತಿದ್ದಾರೆ. ನೀವು ಅದಕ್ಕೆ ಸಹಕರಿಸಬೇಕು. ಯಾರು ಮನೆಯಿಂದ ಹೊರಗೆ ಬಾರದೇ ಇದ್ದರೆ ಯಾರಿಗೂ ಏಟು ಬೀಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ತುಂಬಾ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಎಲ್ಲರಿಗೂ ತೊಂದರೆಯಿದೆ. ಕೊರೊನಾ ನಮಗೂ ತಂದರೆಯೇ ಹಾಗೇ ನಿಮಗೂ ತೊಂದರೆಯೇ. ಈ ವೇಳೆ ಈ ರೀತಿ ಹಲ್ಲೆ ಮಾಡಿದರೆ ಅರೆಸ್ಟ್ ಆಗುತ್ತೀರಿ. ಅರೆಸ್ಟ್ ಆದರೆ ನಿಮ್ಮ ಕುಟುಂಬಕ್ಕೂ ತೊಂದರೆ ಅವರಿಗೂ ನೋವಾಗುತ್ತದೆ. ಪೊಲೀಸರಿಗೂ ಕುಟುಂಬವಿರುತ್ತದೆ. ಟಿವಿಯಲ್ಲಿ ಇದನ್ನು ನೋಡಿ ನನಗೆ ಬಹಳ ನೋವಾಯ್ತು. ಕರ್ನಾಟಕದವರಾಗಿ ನಾವು ರೀತಿ ಮಾಡಬಾರದು ಎಂದು ಶಿವಣ್ಣ ತಿಳಿ ಹೇಳಿದ್ದಾರೆ.
ಒಬ್ಬ ಕರ್ನಾಟಕದ ಸೈನಿಕ ಸಿಯಾಚಿನ್ಯಿಂದ ಹೇಳುತ್ತಾರೆ. ನಾವು ಕಷ್ಟಪಟ್ಟು ಗಡಿಯಲ್ಲಿ ನಿಮ್ಮೆಲ್ಲರನ್ನೂ ಕಾಪಾಡುತ್ತೇವೆ. ಹೀಗಿರುವಾಗ ನಮ್ಮ ದೇಶವನ್ನು ಉಳಿಸಿಕೊಳ್ಳಲು ನಮ್ಮ ದೇಶದ ಜನತೆ ಯಾಕೆ ಸಹಕರಿಸುತ್ತಿಲ್ಲ ಎಂದು ಕೇಳಿದ್ದಾರೆ. ನಾವು ದೇಶದ ಕೆಲಸವನ್ನು ಹೇಳಿಸಿಕೊಂಡು ಮಾಡಬಾರದು. ಗಡಿಯಲ್ಲಿ ನಮಗಾಗಿ ಸೈನಿಕರು ಸಾಕಷ್ಟು ಕಷ್ಟ ಪಡುತ್ತಾರೆ. ನಾವು ಕೂಡ ಇದಕ್ಕೆ ಸಹಕಾರ ನೀಡಬೇಕು. ನಮಗಾಗಿ ದೇಶ, ದೇಶಕ್ಕಾಗಿ ನಾವು, ದೇಶಕ್ಕೆ ಈಗ ಒಂದು ತೊಂದರೆ ಬಂದಿದೆ ಎಲ್ಲರೂ ಸೇರಿ ಅದನ್ನು ಎದುರಿಸಬೇಕು ಎಂದು ಶಿವಣ್ಣ ಹೇಳಿದ್ದಾರೆ.