ಬೆಂಗಳೂರು: ಅಪಹರಣವಾಗಿದ್ದ ಮಗುವನ್ನು ಕೇವಲ 48 ಗಂಟೆಗಳಲ್ಲಿ ರಕ್ಷಿಸಿ, ಪೋಷಕರಿಗೆ ಒಪ್ಪಿಸುವ ಮೂಲಕ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ಘಟನೆ ನಡೆದಿದ್ದು, ಮನೆಯ ಮುಂದೆ ಆಟ ಆಡುತ್ತಿದ್ದ ಬಸವರಾಜ್ ಮತ್ತು ಲಕ್ಷ್ಮಿ ದಂಪತಿಯ ಮೂರು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಘಟನೆ ನಡೆದ 48 ಗಂಟೆಗಳಲ್ಲಿ ದುಷ್ಕರ್ಮಿಗಳಿಂದ ಮೂರು ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತ: ಯಾದಗಿರಿ ಜಿಲ್ಲೆಯವರಾದ ಬಾಲಕನ ಪೋಷಕರು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ವಾಸವಾಗಿದ್ದಾರೆ. ದಂಪತಿ ಕಟ್ಟಡ ಕೆಲಸ ಮಾಡುತ್ತಾರೆ. ಎಂದಿನಂತೆ ಸೋಮವಾರ ಸಹ ಕಟ್ಟಡ ಕೆಲಸಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಮಗುವನ್ನು ಅಪಹರಿಸಿದ್ದರು. ಕೆಲಸ ಮುಗಿಸಿ ಪೋಷಕರು ಮನೆಗೆ ಬಂದು ನೋಡಿದಾಗ ಮಗು ಮನೆಯಲ್ಲಿ ಇರಲಿಲ್ಲ. ಆತಂಕಗೊಂಡ ಬಸವರಾಜ್, ಲಕ್ಷ್ಮಿ ದಂಪತಿ ಘಟನೆ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪಹರಣಕಾರರ ಬೆನ್ನು ಬಿದ್ದು ಬಾಲಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.