– ಕಲ್ಲು, ದೊಣ್ಣೆ, ಚಾಕು ಹಿಡಿದಿದ್ದ ಗುಂಪು
– ಕೃತ್ಯ ಎಸಗಿದ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನ
ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಗಲಭೆಯನ್ನು ಮಾಡಲು ಪೂರ್ವ ನಿಯೋಜಿತವಾಗಿ ಸಂಚು ರೂಪಿಸಲಾಗಿತ್ತು. ಈ ವಿಚಾರವಾಗಿ ಪಾದರಾಯನಪುರದ 11ನೇ ಕ್ರಾಸ್ನಲ್ಲಿ ದಾಳಿ ಪ್ಲಾನ್ ಮಾಡಲಾಗಿತ್ತು. ಮೊದಲೇ ನಡೆದ ಪ್ಲಾನ್ನಂತೆ ಏರಿಯಾದಲ್ಲಿ ವಿದ್ಯುತ್ ಹೋದ ತಕ್ಷಣ ಕಿಡಿಗೇಡಿಗಳ ಗುಂಪು ಬಂದು ಏಕಾಏಕಿ ಪೊಲೀಸರ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿತ್ತು.
ಈ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಸಿದ್ಧಗೊಳಿಸಿರುವ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ದಾಳಿ ಮಾಡಿದ ದುಷ್ಕರ್ಮಿಗಳು ದಾಳಿಯ ವೇಳೆ ಸಾಯಿಸಿ ಸಾಯಿಸಿ ಪೊಲೀಸರನ್ನು ಸಾಯಿಸಿ ಎಂದು ಘೋಷಣೆ ಕೂಡ ಕೂಗುತ್ತಿದ್ದರು. ಕೃತ್ಯ ಎಸಗಿದ ಬಳಿಕ ಸಿಸಿಟಿವಿಯನ್ನು ಧ್ವಂಸ ಮಾಡಲಾಗಿದೆ ಎಂದು ಪೊಲೀಸರು ಎಫ್ಐಆರ್ ನಲ್ಲಿ ನಮೂದಿಸಿದ್ದು, ಎಫ್ಐಆರ್ ಕಾಪಿ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನು ಓದಿ:ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ
ಭಾನುವಾರ ರಾತ್ರಿ ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಬೇರೆಡೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಈ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕೊರೊನಾ ಸೋಂಕು ಶಂಕಿತರು ಭಾಗಿಯಾಗಿದ್ರು ಎನ್ನಲಾಗಿದ್ದು, ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಳಿ ರಾತ್ರಿಯೇ 54 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಜೊತೆಗೆ ಈಗ 22 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.