ಬೆಂಗಳೂರು: ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಜ.31 ಕೊನೆಯ ದಿನ ಎಂದು ವದಂತಿ ಹಬ್ಬಿಸಲಾಗಿದ್ದು, ರಾಜಾಜಿನಗರದಲ್ಲಿ ತಿದ್ದುಪಡಿಗಾಗಿ ಬೆಂಗಳೂರು 1 ಸೆಂಟರ್ನಲ್ಲಿ ಜನ ಕಿ.ಮಿ ಗಟ್ಟಲೇ ಕ್ಯೂ ನಿಂತಿದ್ದಾರೆ.
ಸದ್ಯ ರಾಜಾಜಿನಗರ (Rajajinaga) ಬೆಂಗಳೂರು 1 ನಲ್ಲಿ ಮಾತ್ರ ತಿದ್ದಪಡಿಗೆ ಅವಕಾಶ ನೀಡಲಾಗಿದೆ. ಇದರಿಂದ ಜನ ತಿದ್ದುಪಡಿಗೆ ಮುಗಿಬಿದ್ದಿದ್ದಾರೆ. ಜನರನ್ನ ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಅಲ್ಲದೇ ಇವತ್ತೇ 29ನೇ ತಾರೀಖಿಗೆ ಟೋಕನ್ ವಿತರಣೆ ಮಾಡುತ್ತಿದ್ದಾರೆ. ಇನ್ನೂ ಟೋಕನ್ಗಾಗಿ ಬೆಳಗ್ಗೆ 5 ಗಂಟೆಗೆ ಜನ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಇನ್ನೂ ಜನ ಸಿಬ್ಬಂದಿ ಜೊತೆ ಜಗಳ ಮಾಡಿದ್ದಾರೆ. ಬೆಳಗ್ಗೆ ಮೂರು ಗಂಟೆ, ನಾಲ್ಕು ಗಂಟೆಗೆ ಬರ್ತಿದ್ದೇವೆ. ನೀವು ಕೊಡುವ ದಿನಾಂಕಕ್ಕೆ ನಮಗೆ ಗ್ಯಾರೆಂಟಿ ಕೊಡಿ. ಬಂದಾಗ ಸರ್ವರ್ ಡೌನ್ ಅಂದ್ರೆ ನಾವು ಏನು ಮಾಡೋದು? ಒಂದೇ ಒಂದು ಕೇಂದ್ರಕ್ಕೆ ತಿದ್ದುಪಡಿಗೆ ಅವಕಾಶ ಕೊಟ್ಟ ಕಾರಣ ಈ ರೀತಿ ಒತ್ತಡ ಆಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ರೇಷನ್ ಕಾರ್ಡ್ ತಿದ್ದುಪಡಿ ವಿಚಾರವಾಗಿ ಭಯಪಡುವ ಅಗತ್ಯ ಇಲ್ಲ. ನಾವು ಯಾವುದೇ ಕೊನೆ ದಿನಾಂಕ ನಿಗದಿ ಮಾಡಿಲ್ಲ. ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲೂ ತಿದ್ದುಪಡಿಗೆ ಅವಕಾಶ ಇದೆ. ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ಇದೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.