ಬೆಂಗಳೂರು: ನಾನು ಯಾವುದೇ ಆಕ್ಸಿಡೆಂಟ್ ಮಾಡಿಲ್ಲ, ಸುಖಾ ಸುಮ್ಮನೇ ನನ್ನ ಮೇಲೆ ಯಾಕೆ ಆರೋಪ ಮಾಡುತ್ತೀರಾ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದ ಮಹಮ್ಮದ್ ನಲಪಾಡ್ಗೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಖಡಕ್ ಉತ್ತರ ಕೊಟ್ಟಿದ್ದಾರೆ.
ನಲಪಾಡ್ ಆಕ್ಸಿಡೆಂಟ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಅಪಘಾತವಾದ ಬಗ್ಗೆ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ನಲಪಾಡ್ ವಿರುದ್ಧ ಪ್ರಕರಣ ದಾಖಲಾಗಿದೆ. ನಮ್ಮ ಪೊಲೀಸರು ತನಿಖೆ ನಡೆಸಿದ್ದು ಮೇಖ್ರಿ ಸರ್ಕಲ್ ಬಳಿ ಆಕ್ಸಿಡೆಂಟ್ ಆದ ವೇಳೆ ನಲಪಾಡ್ ಕಾರು ಓಡಿಸುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಾಗಾಗಿ ಅವರ ಮೇಲೆ ಕೇಸ್ ದಾಖಲು ಮಾಡಿ ನೋಟಿಸ್ ನೀಡಿದ್ದೇವೆ ಎಂದರು. ಇದನ್ನು ಓದಿ: ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು
ಇವತ್ತು ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆಗೆ ಹಾಜರಾಗಿ ನಲಪಾಡ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ. ನಲಪಾಡ್ರನ್ನು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಆರೋಪ ಮಾಡಬಹುದು ಅದು ಅವರ ಹಕ್ಕು, ನಾವು ನಮ್ಮ ತನಿಖೆ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಇದನ್ನು ಓದಿ : ನಲಪಾಡ್ ಮೇಲೆ ಬೀಳುತ್ತಾ ಮತ್ತೊಂದು ಕೇಸ್?
ಇದೇ ವೇಳೆ ನಲಪಾಡ್ ಪರ ವಕೀಲ ಉಸ್ಮಾನ್ ಮಾತಾಡಿ, ಯಾವುದೇ ಸೂಕ್ತ ಸಾಕ್ಷಿಗಳಿಲ್ಲದೇ ನಲಪಾಡ್ ಮೇಲೆ ಕೇಸ್ ಹಾಕಿ ನೋಟಿಸ್ ನೀಡಿದ್ದಾರೆ ಎಂದರು. ಆಗ ಸ್ವತಃ ರವಿಕಾಂತೇಗೌಡರೇ ನಲಪಾಡ್ ಅಪಘಾತ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ಕೇಳಿದಾಗ, ಅವರೇನು ಇನ್ವೆಸ್ಟಿಗೇಶನ್ ಆಫೀಸರಾ? ಅವರಿಗೇನು ಮಾಹಿತಿ ಗೊತ್ತು? ಅವರು ಇನ್ವೆಸ್ಟಿಗೇಷನ್ ಮಾಡಲಿ, ಅವರ ಬಳಿ ನಲಪಾಡ್ ಆಕ್ಸಿಡೆಂಟ್ ಮಾಡಿರುವುದರ ಬಗ್ಗೆ ಸಿಸಿಟಿವಿ ದೃಶ್ಯಗಳು ಇದ್ಯಾ ಎಂದು ಉಸ್ಮಾನ್ ಆಕ್ರೋಶ ವ್ಯಕ್ತಪಡಿಸಿದರು.