ಬೆಂಗಳೂರು: ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದರೆ ಬಿಎಸ್ವೈ ಹೀಗೆ ಮೌನವಾಗಿರುತ್ತಿದ್ರಾ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಪ್ರವಾಹಕ್ಕೆ ಪರಿಹಾರ ಕೊಡದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಅವರು, ಮೊದಲು ಮಧ್ಯಂತರವಾಗಿ ಪರಿಹಾರ ಕೊಡಬೇಕು. ಅದು ಬಿಟ್ಟು ಟೀಮ್ ಕಳುಹಿಸುತ್ತೇನೆ. ಅಧ್ಯಯನ ಮಾಡಬೇಕು ಎಂದು ಹೇಳೋದು ಸರಿಯಲ್ಲ. ಒಂದು ವೇಳೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದರೆ ಬಿಎಸ್ವೈ ಹೀಗೆ ಮೌನವಾಗಿರುತ್ತಿದ್ರಾ? ನಾನು ಈ ಸಂದರ್ಭದಲ್ಲಿ ರಾಜಕೀಯ ಮಾಡಲಾರೆ. ಇದು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕಾದ ಸಮಯ. ಆದರೆ ಕೇಂದ್ರದ ಮುಂದೆ ಇವರು ಕೇಳಬೇಕು. ಮೋದಿ ಸರ್ಕಾರಕ್ಕೂ ಇದೆಲ್ಲ ಅರ್ಥವಾಗಬೇಕು ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ಆಗಿದ್ಯೋ ಈ ಹಿಂದಿನ ಸರ್ಕಾರದಲ್ಲಿ ಆಗಿದ್ಯೋ ನನಗೆ ಸಂಬಂಧವಿಲ್ಲ. ಆದರೆ ಈ ಪ್ರಕರಣದ ಜೊತೆಗೆ ಅಪರೇಷನ್ ಕಮಲದ ವಿಚಾರವು ಹೊರಗೆ ಬರಬೇಕು ಎಂದು ಅವರು ಆಗ್ರಹಿಸಿದರು.
ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಪ್ರಕರಣವನ್ನು ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದಾರೆ. ಆದರೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಫೋನ್ ಟ್ಯಾಪಿಂಗ್ ಜೊತೆಗೆ ಅಪರೇಷನ್ ಸರ್ಕಾರದ ಹೆಸರಿನಲ್ಲಿ ಯಾರು ಅಧಿಕಾರವನ್ನು ದೋಚಲು ಯತ್ನಿಸಿದರೋ ಅದು ಕೂಡ ಹೊರಗೆ ಬರಬೇಕು ಎಂದು ಹೇಳಿದರು.
ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಈ ಕಾರಣಕ್ಕಾಗಿ ಸಿಎಂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಾರೆ. ಆದರೆ ಈ ವಿಚಾರವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಬಾರದು. ಈವರೆಗೆ ರಾಜ್ಯದಲ್ಲಿ ಏನೇನು ಘಟನೆ ಆಗಿದ್ಯೋ ಎಲ್ಲವೂ ಹೊರಗೆ ಬರಲಿ. ಸಿದ್ದರಾಮಯ್ಯ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ನಾನೇನು ಹೇಳಲಾರೆ. ಅವರವರ ಊಹೆಗೆ ಬಿಟ್ಟಿದ್ದು ಎಂದು ತಿಳಿಸಿದರು.