ಬೆಂಗಳೂರು: ಇದು ಮನೆಯೊಂದು ಮೂರು ಬಾಗಿಲು ಅಲ್ಲ. ಇದು 1 ಮನೆ, 3 ಕಥೆಯ ಇಂಟ್ರೆಸ್ಟಿಂಗ್ ಕಹಾನಿಯಾಗಿದೆ. ಸರ್ಕಾರಿ ಬಂಗಲೆಯಲ್ಲಿ ವಾಸ ಇದ್ದವರು ಈಗ ಖಾಲಿ ಮಾಡುತ್ತಿಲ್ಲ. ಮನೆ ಖಾಲಿ ಮಾಡಿ ಅಂದರೆ ಮಾಜಿ ಸಚಿವರು ಕಾಲ-ಘಳಿಗೆ ನೋಡುತ್ತಿದ್ದಾರೆ.
ಹೌದು. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕಾಲ-ಘಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿಟ್ಟಿದೆ. ಅಲ್ಲದೆ ಇದರ ಎಫೆಕ್ಟ್ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೇಲೂ ಬೀರಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕುಮಾರಕೃಪ ಅನೆಕ್ಷ್ಚರ್ 1 ನಲ್ಲಿ ಸರ್ಕಾರಿ ಬಂಗಲೆ ಪಡೆದ ಮಾಜಿ ಸಚಿವ ರೇವಣ್ಣ ಇನ್ನೂ ಮನೆ ಖಾಲಿ ಮಾಡಿಲ್ಲ. ಆದರೆ ಆ ನಿವಾಸ ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಅಲರ್ಟ್ ಮಾಡಲಾಗಿದೆ. ಸಿದ್ದರಾಮಯ್ಯ ಇರುವ ಕಾವೇರಿ ನಿವಾಸವನ್ನ ಸಿಎಂ ಯಡಿಯೂರಪ್ಪರಿಗೆ ನೀಡಲಾಗಿದೆ. ಆದರೆ ಮನೆ ಖಾಲಿ ಮಾಡೋಕೆ ಸಮಯ, ಮುಹೂರ್ತ ನೋಡುತ್ತಿರುವ ರೇವಣ್ಣ ಅವರು ಡೆಡ್ಲೈನ್ ಮುಗಿದರೂ ಮನೆ ಖಾಲಿ ಮಾಡಿಲ್ಲ.
ತಮ್ಮ ಪಾಲಿನ ಮನೆ ಖಾಲಿ ಆಗದ ಕಾರಣಕ್ಕೆ ಸಿದ್ದರಾಮಯ್ಯ ಸಹ ಕಾವೇರಿ ನಿವಾಸವನ್ನ ಖಾಲಿ ಮಾಡಿಲ್ಲ. ತಮ್ಮ ಖಾಸಗಿ ನಿವಾಸ ದವಳಗಿರಿಯಲ್ಲೇ ಇರುವ ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡದ ಹೊರತು ತಮ್ಮ ಪಾಲಿನ ಸರ್ಕಾರಿ ಬಂಗಲೆಗೆ ಹೋಗುವ ಯೋಗವಿಲ್ಲ.
ರೇವಣ್ಣರ ಸಂಕ್ರಾಂತಿ, ಕಾಲ, ಮುಹೂರ್ತ ಯಾವಾಗ ಕೂಡಿ ಬರುತ್ತೋ ಆಗಲೇ ಮಾಜಿ ಸಿಎಂ ಹಾಗೂ ಹಾಲಿ ಸಿಎಂಗೆ ಸರ್ಕಾರಿ ಬಂಗಲೆ ಯೋಗ ಕೂಡಿ ಬರಬೇಕಿದೆ ಎಂಬಂತಾಗಿದೆ.