ಬೆಂಗಳೂರು: ಬಂಡಾಯದ ಬಾವುಟ ಹಾರಿಸಿದ್ದ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರನ್ನ ಸಮಾಧಾನ ಮಾಡಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಗೌಡರ ಮುಂದೆ ಶಾಸಕರು ಕೂಡ ತಮ್ಮ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೌದು. 14 ತಿಂಗಳ ಸರ್ಕಾರ ಇದ್ದಾಗ ಅನುಭವಿಸಿದ ಸಂಕಟ, ರೇವಣ್ಣ ಹಾಗೂ ಕುಮಾರಸ್ವಾಮಿ ತಮ್ಮನ್ನ ನಡೆಸಿಕೊಂಡ ರೀತಿ ಎಲ್ಲವನ್ನು ನೋವಿನಿಂದ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ಹೇಳಿ ನಮ್ಮ ಪಾಡಿಗೆ ನಮ್ಮನ್ನ ಬಿಟ್ಟುಬಿಡಿ. ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಈ ವೇಳೆ ಗೌಡರು, ಕೊನೆಗಾಲದಲ್ಲಿ ನನಗೆ ಇಂತಹ ನೋವು ಕೊಡಬೇಡಿ. ಸ್ವಲ್ಪ ತಾಳ್ಮೆಯಿಂದ ಇರಿ ಎಲ್ಲವನ್ನೂ ಸರಿಮಾಡುತ್ತೇನೆ ಎಂಬ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ.
ನವಂಬರ್ 7ರ ಒಳಗೆ ಹೆಚ್.ಡಿ ರೇವಣ್ಣ ಹಾಗೂ ಹೆಚ್.ಡಿ ಕುಮಾರಸ್ವಾಮಿ ಇಬ್ಬರನ್ನೂ ಕೂರಿಸಿ ಮಾತನಾಡುತ್ತೇನೆ. ನಿಮ್ಮ ಜೊತೆಗೂ ಮಾತನಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಕೊನೆಗಳಿಗೆಯಲ್ಲಿ ಇಂತಹ ನೋವು ಕೊಡಬೇಡಿ ಅನ್ನೋ ಸೆಂಟಿಮೆಂಟ್ ಡೈಲಾಗ್ ಹಾಗೂ ನವೆಂಬರ್ 7 ರ ಗಡುವು ಶಾಸಕರ ಮನ ಪರಿವರ್ತನೆ ಮಾಡಿದೆ. ಆದರೆ ನವೆಂಬರ್ 7 ರ ನಂತರ ಏನಾಗಬಹುದು ಅನ್ನೋದೆ ಸದ್ಯದ ಕುತೂಹಲವಾಗಿದೆ.