ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಇಳಿಕೆ, ಕಾರ್ಮಿಕರಿಗೆ ಕನಿಷ್ಟ ವೇತನ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) 2020ರ ಜನವರಿ 8 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಸಂಘಟನೆಗಳಿಂದ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕ ಹಕ್ಕುಗಳನ್ನು ಬಲಪಡಿಸಿ, ಕಾರ್ಮಿಕ ಹಕ್ಕುಗಳನ್ನು ಉಳಿಸಿರಿ ಎಂಬ ಘೋಷ ವಾಕ್ಯದೊಂದಿಗೆ ಮುಷ್ಕರಕ್ಕೆ ಜೆಸಿಟಿಯು ಮುಂದಾಗಿದೆ. ಈಗಾಗಲೇ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಿವೆ.
12 ಅಂಶಗಳ ಮುಂದಿಟ್ಟುಕೊಂಡು ಬೇಡಿಕೆಗಾಗಿ ಮುಷ್ಕರಕ್ಕೆ ಜೆಸಿಟಿಯು ಮುಂದಾಗಿದ್ದು, ಬೇಡಿಕೆ ಈಡೇರಿಸಿ ಕಾರ್ಮಿಕ ಹಕ್ಕುಗಳ ಬಲಪಡಿಸಬೇಕು ಎಂಬುದು ಇವರ ಮೂಲ ಉದ್ದೇಶವಾಗಿದೆ. ಈಗಾಗಲೇ ಜೆಸಿಟಿಯು ನೀಡಿರುವ ಕರೆಗೆ ಕರ್ನಾಟಕದ ಕಾರ್ಮಿಕ ಸಂಘಟನೆಗಳು ಕೂಡ ಬೆಂಬಲ ಸೂಚಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರುತ್ತಿರುವುದನ್ನು ತಡೆಗಟ್ಟಬೇಕು, ಹೊಸ ಮತ್ತು ಲಭ್ಯ ಉದ್ಯೋಗಗಳನ್ನು ಸೃಷ್ಟಿಸಬೇಕು, 18,000 ರೂ. ಕನಿಷ್ಟ ವೇತನವು ಜಾರಿಯಾಗಬೇಕು, ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಕಾಯ್ದೆ ತಿದ್ದುಪಡಿ ನಿಲ್ಲಬೇಕು, ದೇಶದ ಎಲ್ಲಾ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಕೊಡಬೇಕು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು ಎಂದು ಜೆಸಿಟಿಯು ಒತ್ತಾಯಿಸಿದೆ.
ಕೃಷಿ ಬಿಕ್ಕಟ್ಟಿಗೆ ಪರಿಹಾರವಾಗಿ ಡಾ.ಸ್ವಾಮಿನಾಥನ್ ಕೃಷಿ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು. ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗಟ್ಟಲು, ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಜೆಸಿಟಿಯು ಸಜ್ಜಾಗಿದೆ.