ಬೆಂಗಳೂರು: ಚಡ್ಡಿ ದೋಸ್ತಿಗಳಿಬ್ಬರ ಬಡಿದಾಟ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.
ಕೊಲೆಯಾದವನನ್ನು ಸದಾನಂದ ಎಂದು ಗುರುತಿಸಲಾಗಿದೆ. ಈತನನ್ನು ಬಾಲ್ಯ ಸ್ನೇಹಿತ ಯೋಗಿಶ್ ಅಲಿಯಾಸ್ ಹಂದಿ ಯೋಗಿ ಕೊಲೆ ಮಾಡಿದ್ದಾನೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಬಾಲಾಜಿ ಬಾರ್ ಬಳಿ ಸದಾನಂದನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಇತರ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ರಂತೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕ ಗೋಪಾಲಯ್ಯ ಪರ ಸದಾನಂದ ಗುರ್ತಿಸಿಕೊಂಡು ಪ್ರಚಾರ ಮಾಡಿದ್ದನು. ಈ ಬಗ್ಗೆ ಸದಾನಂದ ಹಾಗೂ ಯೋಗಿಶ್ ಕಿತ್ತಾಡಿಕೊಂಡಿದ್ದರು ಎನ್ನಲಾಗಿದೆ.
ಇದೇ ವಿಚಾರವಾಗಿ ಕ್ಯಾತೆ ತೆಗೆದು ಕೊಲೆ ಮಾಡಲಾಗಿದೆ. ಇದಲ್ಲದೇ ಹಣಕಾಸಿನ ವಿಚಾರವಾಗಿಯೂ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಸದ್ಯ ಯೋಗಿಯನ್ನ ವಶಕ್ಕೆ ಪಡೆದಿರುವ ಬಸವೇಶ್ವರ ನಗರ ಪೊಲೀಸರು ಕೊಲೆ ಹಿಂದಿನ ಕಾರಣ ಹುಡುಕಾಡುತ್ತಿದ್ದಾರೆ.