ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿಗೆ ಹೊಸ ನಾಯಕತ್ವದ ಪ್ರಕಟಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ಕೈ ಪಾಳಯಕ್ಕೆ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಬಹುತೇಕ ಮುಂದಿನ ವಾರದ ಆರಂಭದಲ್ಲಿಯೇ ಫಿಕ್ಸ್ ಆಗಲಿದೆ.
ರಾಜ್ಯ ಕಾಂಗ್ರೆಸ್ ನಾಯಕರ ದಂಡು ಇನ್ನೆರಡು ದಿನದಲ್ಲಿ ದೆಹಲಿಗೆ ತಲುಪಲಿದೆ. ವಿಪಕ್ಷ ನಾಯಕನ ಸ್ಥಾನ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್ ಪಿ) ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷನ ಆಯ್ಕೆ ಎಲ್ಲದಕ್ಕೂ ಒಟ್ಟಿಗೆ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ.
ಬಹುತೇಕ ಮುಂದಿನ ಸೋಮವಾರ ಯಾವ ಯಾವ ಜವಾಬ್ದಾರಿ ಯಾರಿಗೆ ಎಂದು ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಘೋಷಣೆ ಸಾಧ್ಯತೆ. ಕೆಪಿಸಿಸಿಗೆ ಬಹುತೇಕ ಡಿ.ಕೆ ಶಿವಕುಮಾರ್ ಹೆಸರು ಅಂತಿಮವಾಗಿದೆ. ಆದರೂ ಸಿದ್ದರಾಮಯ್ಯ ಬಣ ಬೇರೆ ಬೇರೆ ಹೆಸರನ್ನ ಮುಂದಿಟ್ಟುಕೊಂಡು ಕೊನೆ ಗಳಿಗೆಯ ಲಾಬಿ ನಡೆಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಬಲಿಗರಿಂದ ಗೌರವ ವಿದಾಯದ ಅಸ್ತ್ರ
ಇನ್ನೊಂದು ಕಡೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಹಾಗೂ ಸಿಎಲ್ ಪಿ ನಾಯಕನ ಸ್ಥಾನ ಎರಡರಲ್ಲೂ ಮುಂದುವರಿಯುವ ಆಸಕ್ತಿ ತೋರಿದ್ದಾರೆ. ಆದರೆ ಹೈಕಮಾಂಡ್ ಎರಡರಲ್ಲಿ ಒಂದು ಸ್ಥಾನ ಮಾತ್ರ ನೀಡುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಸಿಎಲ್ ಪಿ ಗೆ ಹೊಸ ನಾಯಕನ ನೇಮಕವಾಗುವ ಸಾಧ್ಯತೆಗಳಿವೆ.
ಜನವರಿ 4 ರಿಂದ ರಾಜ್ಯದ ಬಹುತೇಕ ಕೈ ನಾಯಕರು ದೆಹಲಿ ಪ್ರವಾಸಕ್ಕೆ ತೀರ್ಮಾನಿಸಿದ್ದು, ಎಲ್ಲಾ ಬಣದವರು ಹೈ ಕಮಾಂಡ್ ಮುಂದೆ ಲಾಬಿ ಮಾಡಲು ಮುಂದಾಗಿದ್ದಾರೆ. ಆದರೆ ಗುಟ್ಟು ಬಿಟ್ಟು ಕೊಡದ ಹೈಕಮಾಂಡ್ ಜನವರಿ 6 ಅಥವಾ ಆನಂತರ ರಾಜ್ಯ ಕಾಂಗ್ರೆಸ್ಸಿನ ನೂತನ ಸಾರಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.