ಬೆಂಗಳೂರು: ನಾಲ್ಕು ಕೊಲೆ ಹಾಗೂ ದರೋಡೆ ಸೇರಿ ಒಟ್ಟು 30 ಪ್ರಕರಣ ಎದುರಿಸುತ್ತಿರುವ ನಟೋರಿಯಸ್ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸ್ಲಂ ಭರತ್ ಬಂಧಿತ ನಟೋರಿಯಸ್ ರೌಡಿ. ಭರತ್ ಕೆಂಗೇರಿ ಸುತ್ತಮುತ್ತ ಇರುವ ಮಾಹಿತಿ ಪಡೆದಿದ್ದ ಸಿಸಿಬಿ ಟೀಂ ಬಂಧಿಸಲು ತೆರಳಿದ ವೇಳೆ ಪೇದೆ ಹನುಮೇಶ್ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಶರಣಾಗುವಂತೆ ಸಿಸಿಬಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ರೌಡಿ ಭರತ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ತಪ್ಪಿಸಿಕೊಳ್ಳಲು ಮುಂದಾದ ಭರತ್ ಕಾಲಿಗೆ ಪಿಎಸ್ಐ ಪ್ರವೀಣ್ ಅವರು ಗುಂಡು ಹೊಡೆದಿದ್ದಾರೆ. ತಕ್ಷಣವೇ ಭರತ್ನನ್ನು ಬಂಧಿಸಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ ಘಟನೆಯಲ್ಲಿ ಗಾಯಗೊಂಡಿದ್ದ ಪೇದೆ ಹನುಮೇಶ್ ಅವರಿಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭರತ್ ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಮಾಡಿ, ಜೈಲು ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಿಂದ ಹೊರಬಂದ ಬಳಿಕವೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ. ಹೀಗಾಗಿ ಆತನ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಅಷ್ಟೇ ಅಲ್ಲದ ಒಂದು ರೌಡಿ ಪೆರೇಡ್ಗೆ ಕರೆದು ವಾರ್ನ್ ಕೂಡ ಮಾಡಿ ಕಳುಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv