ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಕೊರೊನಾ ಸೋಂಕಿತನ ಶವ ಸಂಸ್ಕಾರದಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಮತ್ತೊಮ್ಮೆ ಲೋಪ ಎಸಗಿದೆ ಎನ್ನುವ ಅನುಮಾನಗಳು ಕಾಡುತ್ತಿವೆ.
ವಿಕ್ಟೋರಿಯಾ ಆಸ್ಪತ್ರೆ ಮೇಲಿಂದ ಸೋಮವಾರ ಜಿಗಿದು ರೋಗಿ-466 ಮೃತಪಟ್ಟಿದ್ದ. ಆತನ ಅಂತ್ಯಸಂಸ್ಕಾರ ಜಯನಗರ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ನಡೆದಿತ್ತು. ಈ ವೇಳೆ ಬಳಸಲಾಗಿದ್ದ ಪಿಪಿಇ ಕಿಟ್ಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪಿಪಿಇ ಕಿಟ್ ನೋಡಿ ಬೈರಸಂದ್ರ ಕೆರೆ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಿಯಮದಂತೆ ಅಂತ್ಯಸಂಸ್ಕಾರದ ನಂತರ ಪಿಪಿಇ ಕಿಟ್ಗಳನ್ನು ನಿಗದಿತ ಏಜೆನ್ಸಿಗಳಿಗೆ ನೀಡಿ ಅದನ್ನು ಸುಟ್ಟು ವಿಲೇವಾರಿ ಮಾಡಬೇಕು. ಸೋಮವಾರ ಅಂತ್ಯಸಂಸ್ಕಾರವಾದ್ರೂ, ಬುಧವಾರ ಸಂಜೆವರೆಗೆ ಪಿಪಿಇ ಕೆರೆ ಬಳಿಯೇ ಬಿದ್ದಿದ್ದವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬುಧವಾರ ಸಂಜೆ ಬಿಬಿಎಂಪಿ ಸಿಬ್ಬಂದಿ, ಪಿಪಿಇಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಪಿಪಿಇ ಸುಟ್ಟ ನಂತರ ಆ ಪ್ರದೇಶದಲ್ಲಿ ಔಷಧ ಸಿಂಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಬಿಬಿಎಂಪಿ ಪಿಪಿಇ ಕಿಟ್ಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ 4 ಏಜೆನ್ಸಿ ನಿಗದಿಪಡಿಸಿದೆ.