ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಬೆಳೆಯುತ್ತಿರುವ ಅಚ್ಚರಿಯ ಸುದ್ದಿಯೊಂದನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ. ಈ ಮೂಲಕ ಗಾಂಜಾ ನಮ್ಮಲ್ಲಿ ಇಲ್ಲವೇ ಇಲ್ಲ ಬೇರೆ ರಾಜ್ಯದಿಂದಷ್ಟೇ ಬರುತ್ತದೆ ಅನ್ನೋ ಬೆಂಗಳೂರು ಪೊಲೀಸರಿಗೆ ಶಾಕ್ ಕೊಟ್ಟಿದೆ.
ಹೌದು. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಲಿನಗರದ ಸೈಟ್ಗಳಲ್ಲಿರುವ ಗಾಂಜಾ ಅಡ್ಡದಲ್ಲೇ ಎರಡು ದಿನಗಳ ಹಿಂದೆ ಜಾಲಹಳ್ಳಿ ಹಾಗೂ ನಂದಿನಿ ಲೇಔಟ್ ಪೊಲೀಸರು ಇಬ್ಬರು ರೌಡಿಗಳನ್ನ ಹೊಡೆದುರುಳಿಸಿದ್ದರು. ಅಲ್ಲದೆ ಆರೋಪಿಗಳನ್ನ ಹೊಡೆದುರುಳಿಸಿ ಗಂಟೆಗಟ್ಟಲೆ ಸುತ್ತಾಡಿದರು. ಆದರೆ ಬೆಳೆದು ನಿಂತಿದ್ದ ಗಾಂಜಾ ಮಾತ್ರ ಖಾಕಿ ಕಣ್ಣಿಗೆ ಬಿದ್ದೇ ಇಲ್ಲ. ಖಾಲಿ ಸೈಟ್ನಲ್ಲಿ ಬೆಳೆದು ನಿಂತಿರುವ ಗಾಂಜಾದ ಬಗ್ಗೆ ತಲೆಯೇ ಕಡೆಸಿಕೊಂಡಿಲ್ಲ.
ಕೂಲಿ ನಗರ ಸುತ್ತಮುತ್ತ ಸ್ಲಂ ಇರುವ ಕಾರಣ ಇಲ್ಲಿ ಇವೆಲ್ಲ ಸರ್ವೇಸಾಮಾನ್ಯ ಎಂದು ಪೊಲೀಸರು ಸುಮ್ಮನಾಗಿದ್ದಾರೋ ಗೊತ್ತಿಲ್ಲ. ಬೆಳೆದು ನಿಂತಿರುವ ಗಾಂಜಾ ಗಿಡಗಳ ಮಧ್ಯೆ ಪೊಲೀಸ್ ಅಧಿಕಾರಿಗಳೇ ರೌಂಡ್ ಹಾಕಿದ್ದಾರೆ. ಆದರೆ ಗಾಂಜಾ ಆರೋಪಿಗಳನ್ನು ಹಿಡಿಯೋ ಈ ಪೊಲೀಸರು ಇದನ್ನ ಬೆಳೆಯೋ ಕಿರಾತಕರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಪೊಲೀಸರು ಬೇರೆ ಕಡೆಯಿಂದ ಸರಬರಾಜಾಗುವ ಗಾಂಜಾ ಮೇಲೆ ನಿಗಾ ಇಡಲು ತೋರುವ ಆಸಕ್ತಿಯನ್ನ ನಗರದಲ್ಲಿ ಬೆಳೆಯುತ್ತಿರುವವರ ಮೇಲೆ ನಿಗಾ ಇಡುತ್ತಿಲ್ಲ ಎಂಬುದು ಕೂಲಿ ನಗರದ ಸೈಟ್ಗಳಲ್ಲಿ ಬೆಳೆದು ನಿಂತಿರುವ ಗಾಂಜಾ ಗಿಡಗಳಿಂದ ಬಹಿರಂಗವಾಗುತ್ತದೆ. ಇತ್ತೀಚೆಗಷ್ಟೇ ಉಡ್ತಾ ಬೆಂಗಳೂರು ಆಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಖೇದ ವ್ಯಕ್ತಪಡಿಸಿದ್ದರು. ಆದರೆ ಈ ರೀತಿ ಬೆಳೆದು ನಿಂತಿರುವ ಗಾಂಜಾಗಳನ್ನ ಯಾರು ಬೆಳೆಯುತ್ತಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಗಮನವಿಟ್ಟು ತಪ್ಪಿಸ್ಥರ ವಿರುದ್ಧ ಕ್ರಮ ಜರಿಗಿಸದೇ ಹೋದರೆ ರಾಜಧಾನಿ ಬೆಂಗಳೂರು ಗಾಂಜಾ ವ್ಯಸನಿಗಳ ತವರೂರು ಆಗುವುದರಲ್ಲಿ ಡೌಟೇ ಇಲ್ಲ.