ಬಳ್ಳಾರಿ: ಕ್ಷೇತ್ರದಲ್ಲಿ ಮತದಾರರ ಆಕ್ರೋಶ ಭುಗಿಲೆದ್ದಿದ್ದು, ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇಬ್ಬರು ಶಾಸಕರಿಗೆ ಮತದಾರರು ಇಂದು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.
ಹೊಸಪೇಟೆಯ ಕೌಲಪೇಟೆ ಯಲ್ಲಿ ಮತಯಾಚನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಆನಂದ್ಸಿಂಗ್ ಅವರಿಗೆ ಮತಯಾಚನೆಗೂ ಅವಕಾಶ ಕೊಡದೇ ಮರಳಿ ಕಳಿಸಿದರು. ಇನ್ನೂ ಚಿಕ್ಕಾಅಂತಾಪುರರಲ್ಲಿ ಪ್ರಚಾರಕ್ಕೆ ತೆರಳಿದ ಸಂಡೂರು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ಅವರಿಗೆ ಮಹಿಳೆಯರು ಪೊರಕೆ ತೋರಿಸಿ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ಬಿಸಿ ಮುಟ್ಟಿಸಿದರು.
ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆನಂದ್ಸಿಂಗ್ ಅವರು ಕ್ಷೇತ್ರದ ಕೌಲಪೇಟೆಯ ಕುರುಬರ ಓಣಿಯಲ್ಲಿ ಮತಯಾಚನೆಗೆ ತೆರಳಿದ್ದ ವೇಳೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಿಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದರು ಪ್ರಶ್ನಿಸಿದರು. ಅಲ್ಲದೇ ಆನಂದಸಿಂಗ್ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಇದರಿಂದ ಮುಜಗರಕ್ಕೆ ಒಳಗಾದ ಆನಂದ್ಸಿಂಗ್ ವಾಪಸ್ ಮರಳಿದರು.
ಸಂಡೂರಿನ ಚಿಕ್ಕಅಂತಾಪುರದಲ್ಲಿ ಕಾರ್ಮಿಕನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಕೇಸ್ ದಾಖಲಿಸಿದ ವೇಳೆ ಪ್ರಶ್ನೆ ಮಾಡದ ಶಾಸಕರು ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು, ಅಲ್ಲದೇ ಕೆಲ ಮಹಿಳೆಯರು ಪೊರಕೆ ಪ್ರದರ್ಶನ ಮಾಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಜಟಾಪಟಿ ಸಹ ನಡೆಯಿತು.