ಬಳ್ಳಾರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡರೂ ಬಳ್ಳಾರಿಯಲ್ಲಿ ಮಾತ್ರ 6 ಮಂದಿ ಶಾಸಕರು ಗೆದ್ದಿದ್ದಾರೆ. ಬಳ್ಳಾರಿ ಗ್ರಾಮಾಂತರದಿಂದ ನಾಗೇಂದ್ರ, ವಿಜಯನಗರದಿಂದ ಆನಂದಸಿಂಗ್, ಸಂಡೂರಿನ ಗೆದ್ದಿರುವ ತುಕಾರಾಂ ಸತತ 3 ಬಾರಿ ಗೆದ್ದು ಹ್ರಾಟ್ರಿಕ್ ಸಾಧನೆ ಮಾಡಿದ್ದು, ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಇವರ ಜೊತೆಗೆ ಲಂಬಾಣಿ ಕೋಟಾದಡಿಯಲ್ಲಿ ಸಚಿವ ಸ್ಥಾನ ನೀಡುವಂತೆ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್ ಬೇಡಿಕೆಯಿಟ್ಟಿದ್ರೆ, ಮತ್ತೊಂದು ಅವಕಾಶ ನೀಡಬೇಕೆಂದು ಪರಮೇಶ್ವರ ನಾಯ್ಕ್ ಸಹ ಲಾಬಿಗೆ ಮುಂದಾಗಿದ್ದಾರೆ. ಇವೆಲ್ಲದರ ನಡುವೆ ಎಂಎಲ್ಸಿ ಕೆಸಿ ಕೊಂಡಯ್ಯರಿಗೆ ಸಚಿವ ಸ್ಥಾನ ನೀಡಬೇಕೆಂದು ಖರ್ಗೆ ಸಹ ವಕಾಲತ್ತು ವಹಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಹಾಗೂ ಅವರ ಬೆಂಬಲಿಗರು ಮಂತ್ರಿಗಿರಿಗಾಗಿ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. 5 ಬಾರಿ ಗೆದ್ದಿರುವ ಶಿವಶಂಕರರೆಡ್ಡಿ ತಮಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಒತ್ತಾಯಿಸಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದ ನಾಲ್ವರು ಕಾಂಗ್ರೆಸ್ ಶಾಸಕರಲ್ಲಿ ಮೂವರು ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಶಾಸಕ ಡಾ.ಕೆ.ಸುಧಾಕರ್, ವಿ ಮುನಿಯಪ್ಪ, ಶಿವಶಂಕರರೆಡ್ಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಕಾಂಗ್ರೆಸ್ನಂತೆ ಜೆಡಿಎಸ್ನಲ್ಲೂ ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ. ಜೆಡಿಎಸ್ಗೆ 11 ಮಂತ್ರಿ ಸ್ಥಾನಗಳು ಲಭಿಸಿದ್ದು, ಎಲ್ಲರೂ ಸಚಿವಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಎಲ್ಲರೂ ನಾನು ಮಂತ್ರಿ, ನಾನು ಮಂತ್ರಿ ಎಂದರೆ ಅದನ್ನು ನಿಭಾಯಿಸುವುದು ಕಷ್ಟವಾಗುತ್ತೆ. ಮಂತ್ರಿ ಆಗಲು ಪಟ್ಟು ಹಿಡಿಯುವುದಕ್ಕಿಂತಾ ಸಮ್ಮಿಶ್ರ ಸರಕಾರ ಯಶಸ್ವಿಯಾಗುವುದನ್ನು ಬಯಸಬೇಕಿದೆ. ನಾನು ಮಂತ್ರಿ ಆಗುವ ಬಗ್ಗೆಯೂ ಚರ್ಚೆ ನಡೆದಿದೆ. ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆ ಅಂತ ಎಚ್. ವಿಶ್ವಾನಾಥ್ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.