– ಜನಿಸಿದ್ದ ಮಗನನ್ನ ನೋಡದೇ ಪ್ರಾಣಬಿಟ್ಟ ಅಪ್ಪ
ಬಳ್ಳಾರಿ: ಚಲಿಸುತ್ತಿದ್ದ ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆಯ ಇಂದು ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಮೀನಕೆರೆ ಬಳಿ ನಡೆದಿದೆ.
ಕೂಡ್ಲಿಗಿ ತಾಲೂಕಿನ ಮಾಡ್ಲಕನಹಳ್ಳಿ ಗ್ರಾಮದ ನಿವಾಸಿ ಹನುಮಕ್ಕ (49) ಹಾಗೂ ಮಂಜುನಾಥ್ (28) ಮೃತಪಟ್ಟ ದುರ್ದೈವಿಗಳು. ಮಂಜುನಾಥ್ ಅವರ ಮಗ ಹರೀಶ್ (5) ಎಂಬುವವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಡ್ಲಕನಹಳ್ಳಿ ಗ್ರಾಮದಿಂದ ಆಂಧ್ರ ಪ್ರದೇಶದ ರಾಯದುರ್ಗಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ.
ಆಂಧ್ರ ಪ್ರದೇಶದ ರಾಯದುರ್ಗದ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮಂಜುನಾಥ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಮಗು-ತಾಯಿಯ ಆರೋಗ್ಯ ವಿಚಾರಿಸಿಕೊಂಡು ಬರಲು ಇಂದು ಮಂಜುನಾಥ್, ತಾಯಿ ಹಾಗೂ ಹಿರಿಯ ಮಗನ ಜೊತೆಗೆ ಬೈಕ್ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದರು.
ಮಾಡ್ಲಕನಹಳ್ಳಿ ಗ್ರಾಮದಿಂದ ಮೀನಕೆರೆ ಹತ್ತಿರ ಹೋಗುವಾಗ, ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಹನುಮಕ್ಕ ಮೃತ ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹರೀಶಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ನಲ್ಲಿದ್ದ ಮಂಜುನಾಥ್ ಅವರ ತಂಗಿಯ ಮಗ ಅಜ್ಜಯ್ಯನಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.