– ಅಂತಿಮ ದರ್ಶನ ಪಡೆದ ಮಠಾಧೀಶರು, ಗಣ್ಯಮಾನ್ಯರು
ಬಳ್ಳಾರಿ: ಹರಪ್ಪನಹಳ್ಳಿಯ ಮಾಜಿ ಶಾಸಕ ಎಂ.ಪಿ.ರವೀಂದ್ರರ ಅವರ ಅಂತ್ಯಕ್ರಿಯೆ ಇಂದು ಹೂವಿನ ಹಡಗಲಿಯಲ್ಲಿ ನಡೆಯಿತು. ಸಂಬಂಧಿಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಆಪ್ತರು ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಮೃತಪಟ್ಟಿದ್ದರು. ಅವರ ಹುಟ್ಟುರಾದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಇಂದು ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಪಟ್ಟಣದಲ್ಲಿ ಮೆರವಣಿಗೆ ಮಾಡಿ ಜಿ.ಬಿ.ಆರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ತೋಟದ ಮನೆಯ ಹತ್ತಿರ ತಂದೆ ಎಂ.ಪಿ. ಪ್ರಕಾಶ ಸಮಾದಿ ಪಕ್ಕದಲ್ಲಿಯೇ ವೀರಶೈವ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.
ಅಪಾರ ಅಭಿಮಾನಿಗಳನ್ನು ಹೊಂದಿದ್ದ ರವೀಂದ್ರರ ಅಂತ್ಯಕ್ರಿಯೆಯಲ್ಲಿ ಪಕ್ಷ ಬೇದ ಮರೆತು ಎಲ್ಲ ನಾಯಕರು, ಮಠಾಧೀಶರು ಹಾಗೂ ಚಲನಚಿತ್ರ ನಟರು ಸೇರಿದಂತೆ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಅಮರೇಗೌಡ ಬೈಯಾಪುರ, ಆನಂದ್ ಸಿಂಗ್, ಭೀಮಾ ನಾಯಕ್, ಮಾಜಿ ಶಾಸಕರು ಹಾಗೂ ಆಪ್ತ ಸ್ನೇಹಿತ ಹುಣಸೂರ್ ಮಂಜುನಾಥ್, ಬಸವರಾಜ ರಾಯರೆಡ್ಡಿ, ಚಿತ್ರನಟ ಶ್ರೀನಗರ ಕಿಟ್ಟಿ, ಅನಿಲ್ ಲಾಡ್, ಜಿ.ಎಸ್.ಗಡ್ಡದೇವರಮಠ ಅವರು ಸೇರಿದಂತೆ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv