-ಇನ್ನೂ 10 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ
ಬೆಳಗಾವಿ: ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರವಾಗಿ ಕಾನೂನು ಹೋರಾಟ ಮಾಡಲು ನಾನು ದಿಲ್ಲಿಗೆ ಹೋಗಿದ್ದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ನಡೆದ ಸಮಾವೇಷದಲ್ಲಿ ಮಾತನಾಡಿದ ಅವರು, ನಾನು ಪ್ರವಾಹ ಪಿಡಿತ ಪ್ರದೇಶಗಳಿಗೆ ಹೋಗಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ ಇದ್ದಂತಹ ವ್ಯವಸ್ಥೆ ನೋಡಿ ನನಗೆ ಅಲ್ಲಿ ಇರಲಿಕ್ಕೆ ಮನಸ್ಸು ಆಗಲಿಲ್ಲ. ಗೋಕಾಕ್ ಮತಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ ಸ್ಪಂದನೆ ಸಿಗಲಿಲ್ಲ. ಮೈತ್ರಿ ಸರ್ಕಾರದಲ್ಲಿರಲು ನನಗೆ ಒಂದು ಕ್ಷಣನೂ ಮನಸ್ಸು ಇರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಚಮಚಾಗಿರಿ ಜನರ ಮಾತುಗಳನ್ನು ಕೇಳಿದ್ದಾರೆ. ನನ್ನ ಜೊತೆ ಸದ್ಯ 20 ಶಾಸಕರು ಇದ್ದಾರೆ, ಜೊತೆಗೆ ಕೋರ್ಟ್ ನಲ್ಲಿ ನ್ಯಾಯ ಸಿಕ್ಕ ಮೆಲೆ ನಮ್ಮ ಹೋರಾಟದ ರೂಪುರೇಷಗಳು ಬೇರೆ ಇರುತ್ತೆ ಎಂದು ಹೇಳಿದರು.
ಇನ್ನೂ 10 ಶಾಸಕರು ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇವತ್ತೆ ಚುನಾವಣೆ ಆದರೂ ನಾನು ಗೋಕಾಕ್ ನಲ್ಲಿ ಸ್ಪರ್ಧೆ ಮಾಡಬಹುದು. ಈ ಅಪರೇಷನ್ ಆಗಬೇಕೆಂದರೆ ಸತೀಶ್ ಜಾರಕಿಹೊಳಿ, ಮತ್ತು ಎಂ.ಬಿ.ಪಾಟೀಲ್ ಕಾರಣ. ನಾನು ಲಕ್ಷ್ಮಿ ದೇವರ ಮುಟ್ಟಿ ಹೇಳುತ್ತೇನೆ ಸತೀಶ್ ಮೋಸಗಾರ, ಆತನಿಂದಲೇ ಅಪರೇಷನ್ ನಡೆದಿದೆ. ಲಖನ್ ಜಾರಕಿಹೊಳಿ ಮತ್ತು ನನ್ನ ಮಧ್ಯೆ ಜಗಳ ಹಚ್ಚುವ ಕೆಲಸ ಸತೀಶ್ ಮಾಡುತ್ತಿದ್ದಾನೆ. ಮುಂದಿನ ದಿನದಲ್ಲಿ ಸತೀಶ್ಗೆ ಯಮಕನಮರಡಿ ಜನ ಒದ್ದು ಓಡಿಸುತ್ತಾರೆ. ನಮ್ಮ ಕುಟುಂಬದಲ್ಲಿ ಸತೀಶ್ ಸತ್ಯಹರಿಶ್ಚಂದ್ರ ಅಲ್ಲ ಎಂದು ಗುಡುಗಿದರು.
ಡಿಕೆಶಿ ಕಾನೂನು ಹೋರಾಟ ಮಾಡಿ ಹೊರಬರಲಿ. ಆತ ನನ್ನ ಆತ್ಮೀಯ ಗೆಳೆಯ ಎಂದ ರಮೇಶ್ ಜಾರಕಿಹೊಳಿ, ಗೋಕಾಕ್ನಲ್ಲಿ ಏನೇ ಕುತಂತ್ರ ಮಾಡಿದರೂ ಸತೀಶನದ್ದು ನಡೆಯಲ್ಲ. ಕಾನೂನಿನ ಹೋರಾಟದ ಬಳಿಕ ನಾನು ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.