ವಿಜಯಪುರ: ಎಲ್ಲ ಮಕ್ಕಳಂತೆ ಕಲಿಯುತ್ತಾ, ನಲಿಯುತ್ತಾ ಆಡಬೇಕಿದ್ದ ಮಗನಿಗೆ ಬ್ಲಡ್ ಕ್ಯಾನ್ಸರ್ ರೋಗ ಬಂದು ಮನೆಯಲ್ಲಿ ಕೂರುವಂತೆ ಮಾಡಿದೆ. ಇರುವ ಓರ್ವ ಮಗನನ್ನು ಬದುಕಿಸಿಕೊಳ್ಳಲು ಬಡ ಪೋಷಕರು ಶಕ್ತಿಮೀರಿ ಪ್ರಯತ್ನ ಮಾಡ್ತಾಯಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಡಕೋಳ ಗ್ರಾಮದ ಮೀನಪ್ಪ ಮಾದರ ಮತ್ತು ಲಗಮವ್ವ ಎಂಬವರ ಮಗ ಮಡಿವಾಳಪ್ಪ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಮೂರನೇ ತರಗತಿ ವರೆಗೂ ಚೆನ್ನಾಗಿಯೇ ಇದ್ದ ಮಡಿವಾಳಪ್ಪ ಏಕಾಏಕಿ ಒಂದು ದಿನ ಅಸ್ವಸ್ಥನಾಗಿದ್ದಾನೆ. ಆಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮಡಿವಾಳಪ್ಪನನ್ನು ಪರೀಕ್ಷಿಸಿದಾಗ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದಿದೆ.
ನಾಲ್ಕು ತಿಂಗಳು ಚಿಕಿತ್ಸೆ ನೀಡಿದರೆ ಮಡಿವಾಳಪ್ಪ ಆರೋಗ್ಯ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಗದ ಕೆಲ ಔಷಧಿಗಳನ್ನು ಹೊರಗಡೆಯಿಂದ ತರಬೇಕಾಗುತ್ತದೆ. ಆದ್ರೆ ತೀವ್ರ ಬಡ ಕುಟುಂಬವಾದ ಕಾರಣ ಇವರ ಹತ್ತಿರ ಹೊರಗಿನಿಂದ ಔಷದಿಯನ್ನು ತರಲು ಆಗುತ್ತಿಲ್ಲ. ಈಗ ಅಲ್ಲಿ ಇಲ್ಲಿ ಸಾಲ ಮಾಡಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಯಾರಾದರು ಸಹಾಯ ಮಾಡಿದ್ದಲ್ಲಿ ಒಂದು ಸಣ್ಣ ಜೀವ ಬದುಕಿಕೊಳ್ಳುತ್ತದೆ. ಈಗ ಸಹಾಯ ಹಸ್ತಕ್ಕಾಗಿ ಮಡಿವಾಳಪ್ಪ ಮತ್ತು ಕುಟುಂಬಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
https://www.youtube.com/watch?v=91rZJHXOods