ಚಿತ್ರದುರ್ಗ: ಈಕೆಯ ಹೆಸರು ಗೌಸಿಯಾ ಭಾನು. ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ನಿವಾಸಿ. ತಂದೆ ಆಟೋಚಾಲಕ. ಗಳಿಸೋ ಅಷ್ಟೋ ಇಷ್ಟೋ ಹಣವೇ ಮನೆಗೆ ಆಧಾರ. ಅಪ್ಪನ ಕನಸಿನಂತೆ ಮಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಬಾರಿ ಹತ್ತನೇ ತರಗತಿಯಲ್ಲಿ ಶೇ 95 ರಷ್ಟು ಅಂಕಗಳನ್ನ ಪಡೆದುಕೊಂಡಿದ್ದಾಳೆ. ಆದ್ರೆ ಪೋಷಕರ ಬಡತನ ಇದೀಗ ಗೌಸಿಯಾಳ ವೈದ್ಯಳಾಗೋ ಕನಸಿಗೆ ಅಡ್ಡಿಯಾಗಿದೆ.
ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಎನ್ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹಳಾಗಿದ್ದಾಳೆ. ಇದರ ಜೊತೆಗೆ ಈ ಪ್ರತಿಭಾವಂತೆ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಕೂಡ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಆದ್ರೆ ಮಗಳ ಈ ಸಾಧನೆಯ ಸಂತಸದ ನಡುವೆಯೇ ಮುಂದೆ ಓದಿಸಲು ಆಗ್ತಾ ಇಲ್ಲವಲ್ಲಾ ಅನ್ನೋ ಕೊರಗು ಪೋಷಕರನ್ನ ಕಾಡುತ್ತಿದೆ. ಬಡತನವೇ ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುವಂತೆ ಮಾಡಿದೆ. ಈಕೆಗೆ ಯಾರಾದ್ರೂ ಸಹಾಯ ಮಾಡಿದ್ರೆ ಉತ್ತಮ ಶಿಕ್ಷಣದ ಅವಕಾಶ ಸಿಕ್ಕರೆ ತನ್ನ ಕನಸು ನನಸು ಮಾಡಿಕೊಳ್ಳಲಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಓದಲು ಆಸಕ್ತಿ ಇರುವ ಈಕೆಗೆ ದಾನಿಗಳ ನೆರವಿನ ಹಸ್ತ ಬೇಕಿದೆ.