ಬೆಳಗಾವಿ: ಕಾಣದ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲೆನೆ ಒಂದು ದಿನ ಗೀತೆಯನ್ನು ಹಾಡುವ ಮೂಲಕ ಬಿಜೆಪಿ (BJP) ಸದಸ್ಯ ಸುನೀಲ್ ಕುಮಾರ್ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕಾಲೆಳೆದಿದ್ದಾರೆ.
ಇಂದು ಸದನದಲ್ಲಿ ಉತ್ತರ ಕರ್ನಾಟಕ (North Karnataka) ಚರ್ಚೆಯ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಸರ್ಕಾರದ ಮೌನದ ಬಗ್ಗೆ ಬೆಲ್ಲದ್ ಪ್ರಸ್ತಾಪ ಮಾಡಿ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಕಾರಣಕ್ಕಾಗಿ ಮೇಕೆದಾಟು ಕೆಲಸ ಆರಂಭವಾಗಿಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಡಿಕೆ ಶಿವಕುಮಾರ್ ಮಧ್ಯಪ್ರವೇಶ ಮಾಡಿ, ನೀವು ಸಿಎಂ ಆಗಬೇಕು ಎಂದು ಕೊಂಡವರು, ವಿಪಕ್ಷದ ನಾಯಕರು ಆಗಬೇಕು ಎಂದ್ದಿದ್ದೀರಿ. ನಿಮಗೆ ಅನುಭವ ಇದೆ, ಮೊನ್ನೆ ತಾನೆ ನ್ಯಾಯಾಲಯದ ಆದೇಶ ಆಗಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಆರು ತಿಂಗಳ ಸಮಯಾವಕಾಶ ನೀಡಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ನಾನು ನಮ್ರತೆಯಿಂದ ಕೈಮುಗಿದು ಕೇಳುತ್ತೇನೆ. ನೀವೆಲ್ಲಾ ಸಹಕಾರ ಕೊಟ್ಟರೆ ಆದಷ್ಟು ಬೇಗ ನಿಮ್ಮ ಜೊತೆ ಭೂಮಿ ಪೂಜೆ ಮಾಡುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ನಾವು ಮಾತನಾಡಿದ್ರೆ ಬಲಾತ್ಕಾರ ಅವರು ಹೇಳಿದ್ರೆ ಚಮತ್ಕಾರ: ಇಕ್ಬಾಲ್ ಹುಸೇನ್
ಈ ವೇಳೆ ಸುನೀಲ್ ಕುಮಾರ್ ಮಧ್ಯ ಪ್ರವೇಶ ಮಾಡಿ, ಇಷ್ಟು ನಯ ವಿನಯ ಎಲ್ಲಿಂದ ಬಂತು ಸರ್ ನಿಮಗೆ? ಇದೇ ಡಿಕೆ ಶಿವಕುಮಾರಾ? ಹೊಸ ಶಿವಕುಮಾರಾ? ಡಿಕೆ ಶಿವಕುಮಾರ್ ಎಂಬುವುದಕ್ಕೆ ಒಂದು ಕಲ್ಪನೆ ಇದೆ. ಇಷ್ಟು ನಯ ವಿನಯ ಹೇಗೆ ? ದಿಢೀರ್ ಆಗಿ ಹೇಗೆ ಬಂತು ಎಂದು ಪ್ರಶ್ನಿಸಿದರು.
ಈ ವೇಳೆ ಕಾಣದ ಕಡಲಿಗೆ ಹಂಬಲಿಸಿದೆ ಮನ.. ಕಾಣಬಲ್ಲೆನೆ ಒಂದು ದಿನ.. ಸೇರಬಲ್ಲನೇ ಒಂದು ದಿನ ಗೀತೆಯನ್ನು ಸಿ ಅಶ್ವಥ್ ಅವರು ಹಾಡಿದ್ದಾರೆ. ಈಗ ಡಿಕೆ ಶಿವಕುಮಾರ್ ಅವರು ಕಾಣದ ಕುರ್ಚಿಗೆ ಹಂಬಲಿಸಿದೇ ಮನ.. ಕೂಡಬಲ್ಲನೇ ಒಂದು ದಿನ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಯ ವಿನಯ ಶುರುವಾಯ್ತೋ? ನಿಜವಾಗಿ ವಿರೋಧ ಪಕ್ಷದ ಬಗ್ಗೆ ನಯ ವಿನಯ ಶುರುವಾಯ್ತೋ? ನಿಮ್ಮ ನಾಯಕತ್ವವನ್ನು ನಾವು ಒಪ್ಪುತ್ತೇವೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಕಾಲೆಳೆದರು.

