– ಶೋಭಾ ಹಠಕ್ಕೆ ರವಿಕುಮಾರ್ರನ್ನು ಬಿಟ್ಟು ಹೋದ ಸಿಎಂ
ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆಯಿತು.
ಬೆಳಗಾವಿಯ ಉದ್ಯಮ್ ಬಾಗ್ನಲ್ಲಿರುವ ಶಗುನ್ ಗಾರ್ಡನ್ನಲ್ಲಿ ನಡೆದ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಮಗಳ ಮದುವೆಗೆ ಸಿಎಂ ಆಗಮಿಸಿದ್ದರು. ಜೊತೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಮದುವೆ ಆಗಮಿಸಿ ನವ ಜೋಡಿಯನ್ನು ಆಶೀರ್ವದಿಸಿದರು. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ
ಕವಟಗಿಮಠ ಅವರ ಮದುವೆ ಸಮಾರಂಭ ಮುಗಿಸಿ ಸಿಎಂ ವಾಹನದಲ್ಲೇ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆಗ ಶೋಭಾ ಕರಂದ್ಲಾಜೆ ಅವರು, ವಾಹನದಲ್ಲಿ ಕರೆದುಕೊಂಡು ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ ಎಂದು ಸಿಎಂ ಕಾಲೆಳೆದರು. ಈ ವೇಳೆ ಗೃಹ ಸಚಿವ ಬೊಮ್ಮಾಯಿ ಅವರು, ನನ್ನ ಬದಲು ವಿಮಾನದಲ್ಲಿ ನೀವು ಹೋಗಿ ಎಂದು ಶೋಭಾ ಅವರಿಗೆ ಹೇಳಿದರು. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್ಡಿಡಿ ಭಾಗಿ
ಶೋಭಾ ಅವರ ಹಠದಿಂದಾಗಿ ಸಿಎಂ ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಬಿಟ್ಟು ಸಂಸದೆಗೆ ಆಹ್ವಾನ ನೀಡಿದರು. ಈ ಮೂಲಕ ವಿಶೇಷ ವಿಮಾನದಲ್ಲಿ ಸಿಎಂ ಜೊತೆ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್ವೈ
ಸಿಎಂ ಬೆಂಗಳೂರಿನಿಂದ ಬರುವಾಗ ವಿಶೇಷ ವಿಮಾನದಲ್ಲಿ ರವಿಕುಮಾರ್ ಅವರನ್ನು ಕರೆದುಕೊಂಡು ಬಂದಿದ್ದರು. ಅಷ್ಟೇ ಅಲ್ಲದೆ ಹುಬ್ಬಳ್ಳಿಗೆ ಹೋಗುವಾಗಲೂ ಅವರನ್ನು ಕರೆದುಕೊಂಡು ಹೋಗಲು ನಿರ್ಧಸಿದ್ದರು. ಆದರೆ ಸಂಸದೆ ಕರಂದ್ಲಾಜೆ ಅವರ ಹಠದಿಂದಾಗಿ ಅವರನ್ನು ಸಿಎಂ ಕೈಬಿಡಬೇಕಾಯಿತು.