ಬೆಳಗಾವಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಗಾರ್ಡನ್ನ ಮಾಲೀಕ, ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ವಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಸುಗಂಧಾ ಮೋರೆ ಸಂತ್ರಸ್ತ ಮಹಿಳೆ. ಕಲ್ಯಾಣಿ ಮೋರೆ ಹಲ್ಲೆ ನಡೆಸಿದ ಆರೋಪಿ. ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿದ ಪೊಲೀಸ್ ಪೇದೆ
ಸುಗಂಧಾ ಮೋರೆ ಅವರು ಬಾಸುರ್ತಿ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ದಿನದ ಹಿಂದೆ ಇವರ ಮೇಲೆ ಹಲ್ಲೆ ನಡೆಸಲಾಗಿದೆ. ಮಕ್ಕಳು ಶಾಲೆಯ ಆವರಣದ ಪಕ್ಕದಲ್ಲಿರುವ ಗಾರ್ಡನ್ನಲ್ಲಿರುವ ಹೂ ಕಿತ್ತಿದ್ದಕ್ಕೆ, ಅಂಗನವಾಡಿ ಸಹಾಯಕಿ ಸುಗಂಧಾ ಮೇಲೆ ಹಲ್ಲೆ ನಡೆಸಲಾಗಿದೆ. ಅದೇ ಗ್ರಾಮದ ಗಾರ್ಡನ್ನ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ಸುಗಂಧಾರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್ಗಳಿವೆ: ಹು-ಧಾ ಪೊಲೀಸ್ ಕಮಿಷನರ್
ಘಟನೆ ನಡೆದು ಮೂರು ದಿನಗಳಾದರೂ ಸಹ ತಲೆ ಮರೆಸಿಕೊಂಡಿರುವ ಆರೋಪಿ ಕಲ್ಯಾಣಿ ಇನ್ನೂ ಅರೆಸ್ಟ್ ಆಗಿಲ್ಲ. ಸುಗಂಧಾ ಕುಟುಂಬದವರು ಬಡವರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗನವಾಡಿ ಸಹಾಯಕಿಯ ಕುಟುಂಬಕ್ಕೆ ಆಸ್ಪತ್ರೆಯ ಬಿಲ್ ಸಹ ಕಟ್ಟಲು ಸಾಧ್ಯವಾಗದ ಸ್ಥಿತಿ ಇದೆ. ಹೀಗಾಗಿ ಕುಟುಂಬಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಬಳಿ ನೆರವಿಗೆ ಮನವಿ ಮಾಡಿದ್ದಾರೆ. ಮಹಿಳೆಗೆ ಸಹಾಯ ಮಾಡಬೇಕು. ಇಲಾಖೆಯಿಂದ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.