ಬೆಳಗಾವಿ: ಪ್ರತಿಯೊಬ್ಬರಿಗೂ ತಾನೂ ಸ್ವಂತ ಮನೆ ಕಟ್ಟಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಮನೆ ಕಟ್ಟಿದ ಮೇಲೆ ಮನೆಗೆ ಏನೂ ಹೆಸರಿಡಬೇಕು ಎಂದು ತಲೆ ಕೆಡಿಸಿಕೊಳ್ಳುವರೇ ಜಾಸ್ತಿ. ಅಂಥದರದಲ್ಲಿ ಚಿಕ್ಕೋಡಿಯ ಕನ್ನಡ ಅಭಿಮಾನಿ ಡಿಫರೆಂಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದಿನ ನಮ್ಮ ಕನ್ನಡಾಭಿಮಾನಿ ತಮ್ಮ ಮನೆಯನ್ನೇ ಕನ್ನಡ ಬಾವುಟಗಳಿಂದ ಸಿಂಗರಿಸಿ, ತಮ್ಮ ಅರಮನೆಗೆ ಭುವನೇಶ್ವರಿ ಎಂಬ ಹೆಸರನ್ನು ಇಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಅನಿಲ್ ಕುಮಾರ್ ಮಾಳಗೆ ಎಂಬವರು ಕನ್ನಡ ನಾಡು, ನುಡಿಯ ಮೇಲೆ ಎಲ್ಲಿಲ್ಲದ ಅಭಿಮಾನ ಹೊಂದಿದ್ದಾರೆ. ಕನ್ನಡಕ್ಕಾಗಿಯೇ ಜನನ ಕನ್ನಡಕ್ಕಾಗಿಯೇ ಮರಣ ಎಂದು ಬಾಳುತ್ತಿರೋ ಇವರಿಗೆ ಕನ್ನಡಮ್ಮ ದಿನಪತ್ರಿಕೆ ಸಂಸ್ಥಾಪಕರಾದ ಮಹಾದೇವ ಟೋಪಣ್ಣವರ ಅವರೇ ಪ್ರೇರಣೆ ಎಂದು ಹೇಳುತ್ತಾರೆ.
ಇವರ ಕನ್ನಡಾಭಿಮಾನ ಮನೆಗೆ ಮಾತ್ರ ಸೀಮಿತವಲ್ಲ. ಶಾಲೆಯಲ್ಲಿ ದಿನನಿತ್ಯ ಇವರು ಕನ್ನಡ ಅಂಕಿಗಳನ್ನೇ ಬಳಸುತ್ತಾರೆ. ಬೇರೆ ಶಿಕ್ಷಕರು ಆಂಗ್ಲ ಭಾಷೆಯಲ್ಲಿ ಶಾಲಾ ದಾಖಲೆಗಳನ್ನು ಬರೆದರೇ ಇವರು ಕನ್ನಡದಲ್ಲಿಯೇ ಬರೆಯೋದು ವಿಶೇಷ. ಜೊತೆಗೆ ಬೈಕ್ ಹಾಗೂ ತನ್ನ ಮನೆ ಮೇಲೆ ಕರ್ನಾಟಕದ ನಕ್ಷೆಯನ್ನು ಬರೆಸಿದ್ದಾರೆ.
ನಾಡು ನುಡಿಯ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ಕನ್ನಡದ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವ ಕೆಲ ಜನರ ಮಧ್ಯೆ ಕನ್ನಡವೇ ನನ್ನ ಉಸಿರು ಎಂದು ಬಾಳುತ್ತಿರುವ ಇಂಥ ಅಪ್ಪಟ ಕನ್ನಡಾಭಿಮಾನಿಗಳೂ ನಿಜಕ್ಕೂ ಇತರರಿಗೂ ಮಾದರಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv