ಚಿಕ್ಕೋಡಿ (ಬೆಳಗಾವಿ): ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಅವರಿಗೆ ರೈತರು ಘೇರಾವ್ ಹಾಕಿದ ಪ್ರಸಂಗ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ.
‘ಆಗ ಊರು ಬಿಟ್ಟು ಹೋಗಿ ಇಗ್ಯಾಕ ನೀವು ಬಂದಿದ್ದಿರಿ? ವಿಶ್ವಾವಿಟ್ಟು ನಿಮ್ಮನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ವಿ ಸ್ವಾಮಿ. ಆದ್ರೆ ನೀವು ಮಾಡಿದ್ದು ಏನು? ನಮಗೆ ಮೋಸ ಮಾಡಿ ಹೋಗಿದ್ರಿ. ಮತ್ಯಾಕೆ ಇಲ್ಲಿಗೆ ಬಂದ್ರಿ, ಮೊದ್ಲು ಇಲ್ಲಿಂದ ಹೋಗ್ರಿ’ ಎಂದು ನೆರೆ ಸಂತ್ರಸ್ತರು ಹಾಗೂ ರೈತರು ಶ್ರೀಮಂತ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ
ನಿಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಸರಿಯಾಗಿ ಹಣ ಪಾವತಿಸಿಲ್ಲ. ಸಾಕಷ್ಟು ರೈತರ ಬಿಲ್ ಬಾಕಿ ಇದೆ. ಉಪ ಚುನಾವಣೆಯ ಟಿಕೆಟ್ ಕೊಟ್ಟರೂ ನೀವು ಆರಿಸಿ ಬರಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ದರೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಿಎಂಗೆ ಸಾಥ್ ನೀಡಿದರು. ಬಳಿಕ ನಡೆದ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಶ್ರೀಮಂತ್ ಪಾಟೀಲ್ ವೇದಿಕೆ ಹಂಚಿಕೊಂಡರು.