– ಸಿಬ್ಬಂದಿ ವಿರುದ್ಧ ಆಕ್ರೋಶ
ಚಿಕ್ಕೋಡಿ(ಬೆಳಗಾವಿ): ಆಧಾರ್ ಕಾರ್ಡ್ ಗಾಗಿ ರಾತ್ರಿಯಿಡಿ ಜಾಗರಣೆ ಮಾಡಿ ಜನ ಪರದಾಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ರಾಯಾಬಾಗ ತಾಲೂಕುಗಳಲ್ಲಿ ನಡೆಯುತ್ತಿದೆ.
ನೂತನ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ರಾತ್ರಿ ಜಾಗರಣೆ ಮಾಡಿ ನಂಬರ್ಗಾಗಿ ಜನ ಕಾಯುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಸಂಕೇಶ್ವರ ಪಟ್ಟಣದ ಅಂಚೆ ಕಚೇರಿ ಮುಂದೆಯೇ ಜನರ ವಸತಿ ಮಾಡಿ ಸರತಿ ನಿಲ್ಲುತ್ತಾರೆ. ಕೇವಲ 30 ಜನರಿಗೆ ಮಾತ್ರ ಅವಕಾಶ ಹಿನ್ನೆಲೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 10 ಗಂಟೆವರೆಗೂ ಜನರ ಕ್ಯೂನಲ್ಲಿ ನಿಂತು ಪಡಬಾರದ ಕಷ್ಟ ಪಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಪ್ರಕ್ರಿಯೆ ಇದ್ದರೂ ರಾತ್ರಿಯೇ ಬಂದು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಜನರು ಇಷ್ಟೆಲ್ಲ ಪರದಾಡುತ್ತಿದ್ದರೂ ಬೆಳಗ್ಗೆ 10 ಗಂಟೆಗೆ ಆರಾಮವಾಗಿ ಸಂಬಂಧಿಸಿದ ಸಿಬ್ಬಂದಿ ಆಗಮಿಸುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬಳಿಕ ಕೇವಲ 30 ಜನರ ಅರ್ಜಿ ಪಡೆದು ಉಳಿದವರನ್ನ ವಾಪಸ್ ಕಳುಹಿಸಿ ನಾಳೆ ಬನ್ನಿ ಎಂದು ಹೇಳುತ್ತಿರುವ ಸಿಬ್ಬಂದಿ ವಿರುದ್ಧ ಹಾಗೂ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಜನರ ಹಿಡಿಶಾಪ ಹಾಕುತ್ತಿದ್ದಾರೆ.
ಅಲ್ಲದೆ ತಕ್ಷಣವೇ ಆಧಾರ್ ಕಾರ್ಡ್ ಕೇಂದ್ರಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಜನರಿಗೆ ಅನುಕೂಲ ಮಾಡಿ ಕೊಡುವಂತೆ ಸಾರ್ವಜನಿಕರು ಬೆಳಗಾವಿ ಜಿಲ್ಲಾಧಿಕಾರಿಗಳನ್ನ ಆಗ್ರಹಿಸಿದ್ದಾರೆ.