ಮಡಿಕೇರಿ: ಕಳೆದ ಬಾರಿ ಕೊಡಗಿನಲ್ಲಾದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮನೆ ಕೊಡುವ ಮುನ್ನವೇ ರೋಟರಿ ಸಂಸ್ಥೆ ಸೂರು ನಿರ್ಮಿಸಿ ಕೊಟ್ಟಿದೆ.
ಕಳೆದ ವರ್ಷ ಕೊಡಗಿನಲ್ಲಿ ಮಳೆರಾಯನ ಆರ್ಭಟಕ್ಕೆ ಇಡೀ ಜಿಲ್ಲೆಯೇ ತತ್ತರಿಸಿ ಹೋಗಿತ್ತು. ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಹೀಗಾಗಿ ಕೊಡಗು ಸಂತ್ರಸ್ಥರಿಗೆ ರೋಟರಿ ಸಂಸ್ಥೆ ರಿ ಬಿಲ್ಡ್ ಕೊಡಗು ಯೋಜನೆಯಡಿ 25 ಮನೆಗಳ ನಿರ್ಮಾಣ ಮಾಡಿಕೊಟ್ಟಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲುವಿನಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟಿದೆ.
ನಿರಾಶ್ರಿತರು ಮನೆ ಕಳೆದುಕೊಂಡು ವರ್ಷ ತುಂಬುತ್ತಿದ್ದರೂ, ರಾಜ್ಯ ಸರ್ಕಾರ ಅವರಿಗೆ ಸೂರು ನೀಡಿಲ್ಲ. ಆದರೆ ಸರ್ಕಾರಕ್ಕೆ ಸೆಡ್ಡು ಹೊಡೆದು 25 ಸಂತ್ರಸ್ತ ಕುಟುಂಬಗಳಿಗೆ ಸಿಂಗಲ್ ಬೆಡ್ ರೂಮ್ ಮನೆ ನಿರ್ಮಿಸಿಕೊಟ್ಟು ರೋಟರಿ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂತ್ರಸ್ತರ ಜಾಗದಲ್ಲೇ ತಲಾ 5 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೆ ಮನೆ ಜೊತೆಗೆ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನೂ ಕೂಡ ರೋಟರಿ ಸಂಸ್ಥೆಯ ಕಲ್ಪಸಿದ್ದು, ಈ ಕಾರ್ಯಕ್ಕೆ ಸಂತ್ರಸ್ತ ಕುಟುಂಬಗಳು ಫುಲ್ ಖುಷ್ ಆಗಿವೆ.