ಉಡುಪಿ: 2020 ರಿಂದ ಎರಡು ವರ್ಷ ಶ್ರೀಕೃಷ್ಣನ ಪೂಜಾಧಿಕಾರಕ್ಕೆ ಅದಮಾರು ಮಠ ಸಿದ್ಧತೆ ಶುರುಮಾಡಿದೆ. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕದಳಿ ಮುಹೂರ್ತ ನಡೆಯಿತು. ಸಂಪ್ರದಾಯದಂತೆ ನೂರಾರು ಬಾಳೆಗಿಡಗಳಿಗೆ ಪೂಜೆ ನೆರವೇರಿಸಿ, ತೋಟದಲ್ಲಿ ಗಿಡ ನೆಡಲಾಯ್ತು.
ಶ್ರೀಕೃಷ್ಣ ಮಠದಲ್ಲಿ ಈಗ ಪಲಿಮಾರು ಮಠದ ಪರ್ಯಾಯ ನಡೆಯುತ್ತಿದೆ. ಮುಂದಿನ 2020ರ ಜನವರಿಯಿಂದ ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಕದಳಿ ಮುಹೂರ್ತ ನೆರವೇರಿತು. ಬಾಳೆಗಿಡಗಳಿಗೆ ಪೂಜೆ ಸಲ್ಲಿಸಿ ಮಠದ ತೋಟದಲ್ಲಿ ಗಿಡವನ್ನು ನೆಡುವ ಪ್ರಕ್ರಿಯೆಯೇ ಬಾಳೆ ಮಹೂರ್ತ. ಕೃಷ್ಣ ಮಠ- ಅನಂತೇಶ್ವರ- ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ಬಾಳೆ ಗಿಡಗಳಿಗೆ ಪೂಜೆ ಸಲ್ಲಿಸಿ ನಂತರ ಮಠದ ತೋಟದಲ್ಲಿ ಬಾಳೆಗಿಡವನ್ನು ನೆಡಲಾಯಿತು. ಬಾಳೆಗಿಡ ಫಲ ಬಿಡುವ ಸಂದರ್ಭ ಅದಮಾರುಮಠದ ಪರ್ಯಾಯ ಪೀಠದಲ್ಲಿ ಇರಲಿದ್ದಾರೆ.
ಈ ಕುರಿತು ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮುಂದಿನ ಪರ್ಯಾಯ ಸಂದರ್ಭ ಭಕ್ತರಿಗೆ ನೆಮ್ಮದಿಯಿಂದ ಕೃಷ್ಣನ ದರ್ಶನ ಸಿಗುವಂತೆ ಮಾಡಲಾಗುವುದು. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟು ಮಾಡಲಾಗುವುದು ಎಂದರು.
ಬಾಳೆ ಮುಹೂರ್ತ ನೆರವೇರಿದ್ದು ಮುಂದೆ ಭತ್ತ, ಅಕ್ಕಿ, ಕಟ್ಟಿಗೆ ಮತ್ತು ಚಪ್ಪರ ಮುಹೂರ್ತಗಳು ನೆರವೇರಲಿದೆ. ಅದಮಾರು ಪರ್ಯಾಯ ಸಂದರ್ಭ ಭಕ್ತರು ಎರಡು ವರ್ಷ ಮಠಕ್ಕೆ ಬಂದು ನೆಮ್ಮದಿಯಿಂದ ದೇವರನ್ನು ಕಂಡುಕೊಳ್ಳುವ ಬಗ್ಗೆ ಈ ಬಾರಿ ಚಿಂತಿಸುವುದಾಗಿ ಮಠ ಚಿಂತನೆ ನಡೆಸಿದೆ. ಪರ್ಯಾಯ ಪೀಠದಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಸದ್ಯ ಗೌಪ್ಯವಾಗಿತ್ತು. ಇದೇ ಕುತೂಹಲವನ್ನು ಜನ ಮತ್ತು ಮಾಧ್ಯಮ 2020ರವರೆಗೂ ಉಳಿಸಿಕೊಳ್ಳಿ. ಪೀಠ ಏರುವ ಮುಹೂರ್ತದಲ್ಲೇ ಇದು ನಿರ್ಧಾರ ಆಗಲಿದೆ ಎಂದು ಹಿರಿಯ ಶ್ರೀಗಳು ಹೇಳಿದರು.
ಪರ್ಯಾಯ ಸಂದರ್ಭ ನಮ್ಮ ಊರಿನ ರೈತರು ಬೆಳೆದ ಬಾಳೆ, ಬಾಳೆ ಎಲೆ ಉಪಯೋಗಿಸ್ತೇವೆ. ಸಾವಯವ ಕೃಷಿಗೆ ಒತ್ತು ನೀಡುತ್ತೆವೆ ಎಂದು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಶಿಕ್ಷಣ, ಅಧ್ಯಯನ ಮತ್ತು ಆಧ್ಯಾತ್ಮಿಕತೆಗೆ ಅದಮಾರು ಮಠ ಹೆಚ್ಚು ಒತ್ತುಕೊಡುತ್ತಾ ಬಂದಿದೆ. ಎರಡು ವರ್ಷಗಳ ಪರ್ಯಾಯದಲ್ಲೂ ಇಂತದ್ದೇ ಕಾರ್ಯ ಮುಂದುವರೆಯುವ ನಿರೀಕ್ಷೆ ಜನರಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv