ಚಿತ್ರದುರ್ಗ: ಇಲ್ಲಿಯವರೆಗೆ ಬೆಟ್ಟಗುಡ್ಡದ ಪಕ್ಕದಲ್ಲಿನ ಹಳ್ಳಿಗಳಿಗೆ ವನ್ಯಮೃಗಗಳು ಲಗ್ಗೆ ಇಡುತ್ತಿದ್ದವು. ಇದೀಗ ಚಿತ್ರದುರ್ಗದ (Chitradurga) ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ನಿತ್ಯ ಬರುತ್ತಿರುವ ಪರಿಣಾಮ ಕೋಟೆನಾಡಿನ ನಾಗರಿಕರಲ್ಲಿ ಆತಂಕ ಮನೆಮಾಡಿದೆ.
ಚಿತ್ರದುರ್ಗದ ಮಾಳಪ್ಪನಹಟ್ಟಿ ಬಳಿಯ ಶಾಂತಿನಗರದಲ್ಲಿ (Shantinagar) ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಇಲ್ಲಿನ ಜನರು ಇದೇ ರಸ್ತೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಇಲ್ಲಿಯೇ ಒಡಾಡುತ್ತಾರೆ. ನಿತ್ಯ ಮನೆ ಪಾಠಕ್ಕೆ ತೆರಳುತ್ತಾರೆ. ಆದರೆ ಕಳೆದ ಒಂದು ವಾರದಿಂದ ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು (Bear) ಬರುತ್ತಿದೆ. ಅಲ್ಲಿ ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತದೆ. ಇದನ್ನೂ ಓದಿ: ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ
ಇನ್ನೂ ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕರಡಿ ಓಡಾಟದ ವೀಡಿಯೋ ವೀಕ್ಷಿಸಿರುವ ಬಡಾವಣೆಯ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಬಡಾವಣೆಯ ಮಕ್ಕಳು, ಮಹಿಳೆಯರು ಸಂಜೆಯಾದರೆ ಮನೆಯೊಳಗೆ ಅಡಗಿಕೊಳ್ಳಲಿದ್ದು, ಭಯದಿಂದ ಬದುಕುವ ವಾತಾವರಣವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್
ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆ ನಗರ ಪ್ರದೇಶದೊಳಗೆ ಎಂಟ್ರಿಯಾಗುವ ಕರಡಿ ಉಪಟಳ ಮಿತಿಮೀರಿದೆ. ಹೀಗಾಗಿ ಆ ಕರಡಿ ಮನೆಯೊಳಗೆ ನುಗ್ಗಿದರೆ ನಮ್ಮ ಗತಿಯೇನು ಎಂಬ ಪ್ರಾಣಭಯ ಮಹಿಳೆಯರು ಹಾಗು ಮಕ್ಕಳಲ್ಲಿದೆ. ಕೂಡಲೇ ಕರಡಿಯನ್ನು ಸೆರೆಹಿಡಿದು ಬೇರೆಡೆಗೆ ಶಿಫ್ಟ್ ಮಾಡಬೇಕೆಂಬ ಆಗ್ರಹ ಬಡಾವಣೆ ಮುಖಂಡರಿಂದ ಕೇಳಿಬಂದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR