ತುಮಕೂರು: ಮಂಗಳವಾರ ರಾತ್ರಿ ವೇಳೆ ಕರಡಿಯೊಂದು ಆಹಾರ ಅರಸಿಕೊಂಡು ಬಂದು ಕತ್ತಲಲ್ಲಿ ಬಾವಿಗೆ ಬಿದ್ದು ಪರದಾಡಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜುಂಜರಾಮನಹಳ್ಳಿಯಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ಕರಡಿ ರಾತ್ರಿ ವೇಳೆ ತೋಟಕ್ಕೆ ಬಂದಿದೆ. ತೋಟದ ಸುತ್ತಲು ಕತ್ತಲ್ಲಿದ್ದ ಕಾರಣಕ್ಕೆ ದಾರಿ ಕಾಣದೆ ಜಾರಿ ಬಾವಿಗೆ ಬಿದ್ದಿದೆ. ಜುಂಜರಾಮನಹಳ್ಳಿ ನಿವಾಸಿ ಜನಾರ್ದನ್ ಎಂಬವರ ತೋಟದ ಬಳಿಯ ಬಾವಿಗೆ ಕರಡಿ ಬಿದ್ದು ಮೇಲಕ್ಕೆ ಬರಲಾಗದೆ ರಾತ್ರಿಯಲ್ಲಾ ಪರದಾಡಿದೆ. ಬಾವಿಯಲ್ಲಿ ನೀರು ಇಲ್ಲದ ಕಾರಣ ಕರಡಿ ಜೀವ ಉಳಿದಿದೆ. ಬೆಳಗ್ಗೆ ತೋಟದ ಬಳಿ ಗ್ರಾಮಸ್ಥರು ಓಡಾಡುವ ವೇಳೆ ಕರಡಿ ಕೂಗುತ್ತಿದ್ದ ಧ್ವನಿ ಕೇಳಿ ಬಾವಿಯ ಬಳಿ ಹೋಗಿ ನೋಡಿದ್ದಾರೆ. ಆಗ ಕರಡಿ ಬಾವಿಗೆ ಬಿದ್ದು ಪರದಾಡುತ್ತಿರುವುದನ್ನು ಕಂಡು ಅರಣ್ಯ ಇಲಾಖೆಯವಗೆ ಮಾಹಿತಿ ತಿಳಿಸಿದ್ದಾರೆ.
ಜುಂಜರಾಮನಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಕೆಲ ದಿನಗಳ ಹಿಂದೆ ಅನೇಕರ ಮೇಲೆ ಕರಡಿ ದಾಳಿ ನಡೆಸಿತ್ತು. ಕರಡಿ ದಾಳಿಯಿಂದ ಇಲ್ಲಿನ ಜನರು ಆತಂಕದಲ್ಲಿದ್ದರು. ಅಲ್ಲದೆ ಕರಡಿ ಮತ್ತೆ ಕಾಣಿಕೊಂಡಿರುವುದರಿಂದ ಜನರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಕರಡಿಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv