ಹಾವೇರಿ: ನನಗೆ ಒಬ್ಬಳೇ ಹೆಂಡತಿ. ಆದರೆ ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕುವಂತಾಗಿದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಚಾಯಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಅವರು, ಬಿಜೆಪಿಗೆ ಬಂದು ಆರನೇ ದಿನದ ಸಂಸಾರ ನನ್ನದು. ಬಣಕಾರ್ ನಾವು ಹೊಂದಿಕೊಂಡಿದ್ದೇವೆ. ಆದರೆ ಕೆಳಮಟ್ಟದ ಕಾರ್ಯಕರ್ತರೊಂದಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಆ ಕಾರ್ಯಕರ್ತರು, ಈ ಕಾರ್ಯಕರ್ತರು ಅನ್ನೋದು ಇನ್ನೂ ಸ್ವಲ್ಪ ಇದೆ. ಕಾರ್ಯಕರ್ತರನ್ನ ಒಗ್ಗೂಡಿಸುವ ಕೆಲಸವಾಗಬೇಕಿದೆ. ಏಕೆಂದರೆ ಒಬ್ಬರನ್ನು ನೋಡಿದರೆ, ಇನ್ನೊಬ್ಬರು ನನ್ನನ್ನೇಕೆ ನೋಡಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಹೀಗಾಗಿ ಬಿಜೆಪಿಗೆ ಬಂದು ಇಬ್ಬರು ಹೆಂಡತಿಯರನ್ನು ನಿಭಾಯಿಸಿದಂತಾಗುತ್ತದೆ ಎಂದರು.
ನನಗೆ ಇರೋದು ಒಬ್ಬಳೇ ಹೆಂಡತಿ ಎಂದಾಗ ಕೌರವನಿಗೆ ಇರೋದು ಒಬ್ಬಳೇ ಹೆಂಡತಿ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಕಿಚಾಯಿಸಿದರು. ಇಂದು ಪ್ರಚಾರಕ್ಕೆ ಹೋಗಬೇಕಿತ್ತು. ಆದರೆ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಪ್ರಚಾರಕ್ಕೆ ಹೋಗಲು ಆಗಲಿಲ್ಲ. ನಾವಿಬ್ಬರೂ ಒಂದಾದಾಗ ನೀವು ಬೇರೆ ಬೇರೆ ಆಗಿರೋದು ಒಳ್ಳೆಯದಲ್ಲ. ಇನ್ನೊಂದಿಷ್ಟು ಮತ ಹಾಕಿದ್ದರೆ ಬಣಕಾರ್ ಗೆಲ್ಲುತ್ತಿದ್ದರು ಅಂದುಕೊಂಡಿರುತ್ತೀರಿ. ಆದರೆ ಬಣಕಾರ್ ಗೆದ್ದಿದ್ದರೂ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ ಎಂದರು.
ನಾನು ಬಿಜೆಪಿಗೆ ಬರಬೇಕು ಎಂದು ಬಹಳ ಜನ ಬಯಸಿದ್ದಿರಿ ಅನ್ನಿಸುತ್ತದೆ. ನಾನು ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಮತ್ತೆ ಸ್ಪರ್ಧಿಸಬೇಕು, ಬಣಕಾರ್ ನಾವು ಒಂದಾಗಬೇಕು ಎನ್ನುವುದೆಲ್ಲ ಹಣೆಬರಹ. ಅದೇ ರೀತಿಯಾಗಿದೆ ಎಂದು ಪಾಟೀಲ್ ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.