ಕಾರವಾರ: ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹೈಕೋರ್ಟ್ ಏನು ಆದೇಶ ನೀಡುತ್ತೋ ಅದನ್ನು ಪಾಲಿಸಲೇಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಮುಖ್ಯವಾದರೆ ಅಂದಿನ ನಿಯಮ ಪಾಲನೆ ಮಾಡಬೇಕು. ಈ ಪರೀಕ್ಷೆಯಲ್ಲಿ ಗೈರಾದವರಿಗೆ ಮತ್ತೆ ಪ್ರತ್ಯೇಕ ಪರೀಕ್ಷೆ ಕೊಡುವುದಿಲ್ಲ. ಮುಂದೆ ಪರೀಕ್ಷೆ ನಡೆದಾಗಲೇ ತೆಗೆದುಕೊಳ್ಳಬೇಕು. ಹಿಜಬ್ ವಿಷಯದಲ್ಲಿ ಸಂಘಟನೆಗಳು, ವಿಚಾರವಾದಿಗಳು ಇದರ ಹಿಂದೆ ಇದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಗುಡುಗಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ 20 ಸಾವಿರ ಶಾಲೆಯಲ್ಲಿ ಅರ್ಲಿ ಚೈಲ್ಡ್ ಎಜುಕೇಶನ್ ಪರಿಚಯ ಮಾಡುತಿದ್ದೇವೆ ಎಂದ ಅವರು ಈ ಹಿಂದೆ ಆದ ಪಠ್ಯಗಳ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತಿದ್ದೇವೆ. ಮಕ್ಕಳಿಗೆ ರಾಷ್ಟ್ರೀಯವಾದಿಗಳಾಗಿ ರೂಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಾನು ಕಿಂಗ್ ಆಗಲ್ಲ, ನನಗೆ ಕಿಂಗ್ ಮೇಕರ್ ಆಗೋಕೆ ಇಷ್ಟ: ಸಿಎಂ ಇಬ್ರಾಹಿಂ
ಇನ್ನೊಂದು ವಾರದಲ್ಲಿ ಶಿಕ್ಷಕರ ನೇಮಕಾತಿ ನೋಟಿಫಿಕೇಷನ್ ಹೊರಡಿಸುತ್ತೇವೆ. 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 5 ಸಾವಿರ ಕಲ್ಯಾಣ ಕರ್ನಾಟಕ, 10 ಸಾವಿರ ಕರ್ನಾಟಕ ಭಾಗಕ್ಕೆ ಅವಕಾಶ ನೀಡುತಿದ್ದೇವೆ. ಕೋವಿಡ್ ಕಾರಣದಿಂದ ಶಾಲೆಗಳನ್ನು ಬಂದ್ ಮಾಡಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬೇಸಿಗೆ ರಜೆ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ: ಕಾರಜೋಳ