ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯ ನೆಲಮಂಗಲದಲ್ಲಿ ಬಿಬಿಎಂಪಿ ವಾಹನವೊಂದು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿಯೇ ಸುರಿದು ಹೋಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬಿಬಿಎಂಪಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ವಿಶ್ವೇಶ್ವರಪುರ ರಸ್ತೆಯ ಪಕ್ಕದಲ್ಲಿ ಬಿಬಿಎಂಪಿ ವಾಹನ ತ್ಯಾಜ್ಯ ಸುರಿದು ಹೋಗಿದ್ದಾರೆ. ಪರಿಣಾಮ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ರೀತಿ ತ್ಯಾಜ್ಯ ಸುರಿದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಬಿಬಿಎಂಪಿ ವಾಹನಗಳನ್ನು ತಡೆದು ಸ್ಥಳೀಯರು ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಬಸವನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮಾಜಾನ್.ಬಿ ಭೇಟಿ ಪರಶೀಲನೆ ನಡೆಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಕಸವನ್ನು ತಂದು ಸುರಿದು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳದಲ್ಲಿ ಕರವೇ ಶಿವರಾಮೇಗೌಡ ಬಣದಿಂದಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್ ಮತ್ತು ಗುತ್ತಿಗೆದಾರರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.
ಸ್ಥಳಕ್ಕೆ ಮಾಜಿ ಶಾಸಕ ನರೇಂದ್ರ ಬಾಬು ಭೇಟಿ ನೀಡಿ, ಮೇಯರ್ ಜೊತೆ ಫೋನ್ ಮೂಲಕ ಮಾತನಾಡಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ತ್ಯಾಜ್ಯದ ಲಾರಿ ಚಾಲಕ ಹಾಗೂ ಕಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನರೇಂದ್ರ ಬಾಬು ಒತ್ತಾಯಿಸಿದ್ದಾರೆ.