ಬೆಂಗಳೂರು: ಕೆಆರ್ ಸರ್ಕಲ್ನ (KR Circle) ಅಂಡರ್ ಪಾಸ್ನಲ್ಲಿ (Under Pass) ಸಿಲುಕಿದ್ದ ಐವರನ್ನು ರಕ್ಷಿಸಿದ್ದ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ಅವರನ್ನು ಬಿಬಿಎಂಪಿ (BBMP) ಕಮಿಷನರ್ ತುಷಾರ್ ಗಿರಿನಾಥ್ ಸನ್ಮಾನಿಸಿ ಪ್ರಶಂಸಿಸಿದ್ದಾರೆ.
ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್ನ ಅಂಡರ್ ಪಾಸ್ನಲ್ಲಿ ಕುಟುಂಬವೊಂದು ಕಾರಿನಲ್ಲಿ ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಪಬ್ಲಿಕ್ ಟಿವಿ ಚಾಲಕನ ಸಾಹಸಕ್ಕೆ ಅಭಿನಂದನೆ ಸಲ್ಲಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಿಜಯ್ ಕುಮಾರ್ ಅವರು ಸಹಾಸದ ಕೆಲಸ ತೋರಿಸಿದ್ದಾರೆ. ಬಹಳ ಶ್ರಮಪಟ್ಟು ಜೀವ ಉಳಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರ ಕೆಲಸ ಶ್ಲಾಘನೀಯ. ಸಾರ್ವಜನಿಕರು ಸಹ ಇತಂಹ ಸಮಯದಲ್ಲಿ ಜನರ ನೆರವಿಗೆ ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್ಗೆ ಬಹುಮಾನ ಘೋಷಣೆ
ಘಟನೆಯೇನು?
ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್ನ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?