– ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್ನಲ್ಲಿ ಹೆಚ್ಚಿನ ಮಹತ್ವ
ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಮಂಡನೆಯಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್ಗೆ ಅನುಮೋದನೆ ನೀಡಿದ್ದು, ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಿದ್ದಾರೆ.
19,927 ಕೋಟಿ ಬೃಹತ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು (Brand Bengaluru) ದೃಷ್ಟಿಕೋನಕ್ಕೆ ಅನುಗುಣವಾಗಿ ಬೆಂಗಳೂರನ್ನು ಅಧುನಿಕ ನಗರವನ್ನಾಗಿಸುವ ಘೋಷಣೆ ಮಾಡಲಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್ನಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಟ್ರಾಫಿಕ್ ಮುಕ್ತ, ಗ್ರೀನ್ ಸಿಟಿ, ಟೆಕ್, ಶಿಕ್ಷಣ, ಆರೋಗ್ಯ, ರೋಮಾಂಚಕ ಬೆಂಗಳೂರು, ನೀರಿನ ಭದ್ರತೆಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ 1,790 ಕೋಟಿ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ.
ಯಾವುದಕ್ಕೆ ಎಷ್ಟು ಅನುದಾನ ಮೀಸಲು?
*ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ 1,400 ಕೋಟಿ ಮೀಸಲು ಇರಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕ, ಒಣ ತ್ಯಾಜ್ಯ ನಿರ್ವಹಣಾ ಘಟಕ, ಮೆಕ್ಯಾನಿಕ್ ಸ್ವೀಪಿಂಗ್ ಯಂತ್ರಗಳು, ಇನ್ನಿತರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ 1,400 ಕೋಟಿ ಅನುದಾನ ಮೀಸಲಿರಿಸಲಾಗಿದೆ.
*ಬೆಂಗಳೂರು ಶಿಕ್ಷಣ ಯೋಜನೆ ಅನುಷ್ಠಾನಗಳಿಗೆ 183 ಕೋಟಿ ಮೀಸಲಿಡಲಾಗಿದೆ. 15 ಶಾಲೆಗಳ ನವೀಕರಣ, 60 ಶಾಲೆಗಳ ಸ್ಮಾರ್ಟ್ ಬೋರ್ಡ್, ಶಾಲಾ ಕಟ್ಟಡಗಳ ನಿರ್ವಹಣೆಗೆ 23 ಕೋಟಿ, ಶಾಲಾ ಮೈದಾನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
*ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ಅನುದಾನ ಕೊಟ್ಟಿದ್ದು, 19 ಹೊಸ ಆಸ್ಪತ್ರೆಗಳು, 26 ಹೊಸ ಡೆಂಟಲ್ ಆಸ್ಪತ್ರೆ, ಬೀದಿನಾಯಿಗಳ ನಿರ್ವಹಣೆಗೆ 60 ಕೋಟಿ ಅನುದಾನ ನೀಡಲಾಗಿದೆ.
*ಬೆಂಗಳೂರು ನಗರವನ್ನು ಸುಂದರೀಕರಿಸಲು, ಆಕರ್ಷಣೆ ಮಾಡಲು 50 ಕೋಟಿ, ಜಂಕ್ಷನ್ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕೆ 25 ಕೋಟಿ ಮೀಸಲು ಇಡಲಾಗಿದೆ.
*ಸ್ಕೈ ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ಅನುದಾನ ನೀಡಲಾಗಿದೆ.
*ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 247.25 ಕೋಟಿ ಮೀಸಲು ಇಡಲಾಗಿದೆ.
*225 ವಾರ್ಡ್ಗಳ ಅಭಿವೃದ್ಧಿಗಾಗಿ ವಾರ್ಡ್ಗೆ ತಲಾ 2.50 ಕೋಟಿಯಂತೆ 675 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
*ಪ್ರೀಮಿಯರ್ ಎಫ್ಎಆರ್ ನೀತಿ ಜಾರಿ ಮಾಡಿದ್ದು, ಇದರಿಂದ 2 ಕೋಟಿ ಆದಾಯ ನೀರಿಕ್ಷೆ ಮಾಡಲಾಗಿದೆ.
*ಪಾಲಿಕೆ ಸಿಬ್ಬಂದಿ ವರ್ಗಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅವಕಾಶ ಕೊಡಲಾಗಿದೆ.
*ಸಿಬ್ಬಂದಿ ಹಾಜರಾತಿ ಕಠಿಣಗೊಳಿಸಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗಿದೆ.
*12,692 ಪೌರಕಾರ್ಮಿಕರ ಕಾಯಂಗೊಳಿಸಿ 500 ಕೋಟಿ ಮೀಸಲು ಇರಿಸಲಾಗಿದೆ.
*5,716 ಕೋಟಿ ಕಂದಾಯ ನಿರೀಕ್ಷೆ ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುವುದು.
*ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಮಾಡಿದ್ದು, ಇದರಿಂದ 750 ಕೋಟಿ ಆದಾಯ ನಿರೀಕ್ಷಿಸಲಾಗಿದೆ.