ಹಾವೇರಿ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಚಲಾವಣೆ ನಂತರ ಮಾತನಾಡಿದ ಅವರು, ಇಡೀ ದೇಶವೇ ರಾವತ್ ಅವರ ಸಾವಿಗೆ ಕಂಬನಿ ಮಿಡಿದಿದೆ. ಆದರೆ ಕೆಲವರು ಅವರ ಸಾವನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ಗಳನ್ನು ಹಾಕಿರುವುದು ತೀವ್ರ ಖಂಡನೀಯ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ
ನಿನ್ನೆ ಏರ್ಫೋರ್ಸ್ ಕಮಾಂಡೋ ಆಸ್ಪತ್ರೆಗೆ ಭೇಟಿ ನೀಡಿ ಗ್ರೂಪ್ ಕ್ಯಾಪ್ಟನ್ ವರುಣ ಪ್ರತಾಪ ಸಿಂಗ್ ಬಗ್ಗೆ ಮಾಹಿತಿ ಪಡೆದುಕೊಂಡು ಬಂದಿದ್ದೇನೆ. ಅಲ್ಲಿ ಉತ್ತಮ ವೈದ್ಯರ ತಂಡವಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜನರಲ್ ರಾವತ್ರ ಮರಣವನ್ನು ಸಂಭ್ರಮಿಸಿದ ಕಿಡಿಗೇಡಿ ಅರೆಸ್ಟ್
ಲಸಿಕೆ ಅಭಿಯಾನ ಕುರಿತು ಮಾತನಾಡಿದ ಸಿಎಂ, ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಕೇಂದ್ರದ ಪರಿಣಿತರ ತಂಡ ನಿರ್ಧಾರ ಮಾಡುತ್ತದೆ. ಕೇರಳದಲ್ಲಿ ಹಕ್ಕಿ ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಈಗಾಗಲೆ ಆ ಬಗ್ಗೆ ಸಭೆ ನಡೆಸಿದ್ದೇನೆ. ಅಗತ್ಯ ಔಷಧಿ ಮತ್ತಿತರೆ ಸಾಮಗ್ರಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.