ನವದೆಹಲಿ: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ಮರೆಮಾಚಲು ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ (Milk Price Hike) ಮಾಡಿ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಸುಮಾರು 500 ಕೋಟಿ ರೂ. ಪ್ರೋತ್ಸಾಹಧನ ಕೊಡುವುದು ಬಾಕಿ ಇದೆ. ಪ್ರೋತ್ಸಾಹ ಧನ ಇಲ್ಲದೇ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟಕ್ಕೀಡಾಗಿವೆ. ಇಡೀ ವರ್ಷ ಪ್ರೋತ್ಸಾಹಧನ ನೀಡದೇ, ನೀವೇ ದರ ಹೆಚ್ಚಳ ಮಾಡಿಕೊಂಡು ನೀವೇ ಪ್ರೋತ್ಸಾಹಧನ ನೀಡಿ ಎಂದು ಜನರ ಮೇಲೆ ಹೊರೆ ಹಾಕಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ದಿವಾಳಿಯಾಗಿರುವುದಕ್ಕೆ ಇದು ಮತ್ತೊಂದು ಸಾಕ್ಷಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?
ತಮ್ಮ ವೈಫಲ್ಯ ಮುಚ್ಚಿಕೊಂಡು ಸರ್ಕಾರ ಕೊಡಬೇಕಾದ ಪ್ರೋತ್ಸಾಹಧನವನ್ನು ಕೆಎಂಎಫ್ಗೆ 4 ರೂ. ಹಾಲಿನ ದರ ಹೆಚ್ಚಳ ಮಾಡಿ, ಜನರ ಮೇಲೆ ಭಾರ ಹೇರಿದೆ. ವರ್ಷದಲ್ಲಿ ಮೂರು ಬಾರಿ 9 ರೂ. ಹೆಚ್ಚಳ ಮಾಡಿದ್ದಾರೆ. ಇದೊಂದು ಬೇಜವಾಬ್ದಾರಿ ರಾಜ್ಯ ವಿರೋಧಿ ಸರ್ಕಾರವಾಗಿದೆ. ರಾಜ್ಯವನ್ನು ದಿವಾಳಿ ಮಾಡಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯವನ್ನು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಭಂಡತನಕ್ಕೆ ಬಿದ್ದಿದೆ. ವಿದ್ಯುತ್ ದರ ಹೆಚ್ಚಳ ಮಾಡಿದೆ. ಡಿಜಿಟಲ್ ಮೀಟರ್ ಅಳವಡಿಕೆ ದೊಡ್ಡ ಹಗರಣವಾಗಿದೆ. ಪೆಟ್ರೋಲ್, ಡಿಸೇಲ್, ಮುದ್ರಾಂಕ ನೋಂದಣಿ ಶುಲ್ಕ ಎಲ್ಲವನನ್ನೂ ಹೆಚ್ಚಳ ಮಾಡಿದ್ದಾರೆ. ಅಬಕಾರಿ ತೆರಿಗೆ ದರವಂತೂ ಲೆಕ್ಕವಿಲ್ಲದಷ್ಟು ಹೆಚ್ಚಳ ಮಾಡಿದ್ದಾರೆ. ಕಳೆದ ವರ್ಷ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿನ ತೆರಿಗೆ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಈಗ ಸುಮಾರು 55 ಸಾವಿರ ಕೋಟಿ ರೂ. ಹೊಸ ತೆರಿಗೆ ಮೂಲಕ ಜನರ ಮೇಲೆ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
– ಬಡವರು ಅತಿ ಬಡವರಾಗುತ್ತಿದ್ದಾರೆ
ಇಷ್ಟೆಲ್ಲಾ ಆದರೂ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಒಂದು ಕಡೆ ತೆರಿಗೆ (Tax) ಇನ್ನೊಂದೆಡೆ ಬೆಲೆ ಏರಿಕೆ ಭಾರ, ಇದರಿಂದ ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ. ಬಡವರು ಅತಿ ಬಡವರಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಈ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಅಂತ ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ, ಸರ್ಕಾರ ಕೊಡಬೇಕಾಗಿರುವ ಪ್ರೋತ್ಸಾಹ ಧನ ಏಕೆ ಕೊಡುತ್ತಿಲ್ಲ? ತಮ್ಮ ಆರ್ಥಿಕ ದಿವಾಳಿತನ ಮುಚ್ಚಿಕೊಳ್ಳಲು ರೈತರ ಹೆಸರಿನಲ್ಲಿ ದರ ಹೆಚ್ಚಿಸಿದ್ದಾರೆ. ಅದನ್ನು ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀಡುವುದಿಲ್ಲ ಎಂದಿದ್ದಾರೆ.
ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಪಕ್ಷ ನೋಟಿಸ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೆ ಪಕ್ಷದ ಶಿಸ್ತು ಸಮಿತಿ ಅವರಿಗೆ ನೋಟಿಸ್ ಕೊಟ್ಟಿದೆ. ಅವರು ನೋಟಿಸ್ಗೆ ಉತ್ತರ ನೀಡಲಿದ್ದಾರೆ. ಹೀಗಾಗಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ