ಚಿತ್ರದುರ್ಗ: ಪಠ್ಯ ಪುಸ್ತಕ ಸಮಿತಿ ವಿಸರ್ಜನೆಯಾಗಿದೆ. ಆದರೆ ರದ್ದು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದೇವರ ಕೊಟ್ಟ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ. ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ ಎಂದು ತಿಳಿಸಿದರು.
ಇನ್ನೂ ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳಿವೆ. ಬಸವಣ್ಣನವರ ಪಠ್ಯದಲ್ಲಿ ಒಂದು ಲೈನ್ ವ್ಯತ್ಯಾಸವಾಗಿದೆ. ಉಳಿದಂತೆ ಬರಗೂರು ಸಮಿತಿ ರಚಿಸಿದ್ದ ಪಠ್ಯದಲ್ಲಿ ಇದ್ದಂತೆ ಇದೆ ಎಂದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ- ಎಲ್ಲಾ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ
ಬಸವಣ್ಣನವರ ಪಠ್ಯದ ವ್ಯತ್ಯಾಸ ಸರಿಪಡಿಸಲಾಗುವುದು. ನಾನಾ ಮಠಗಳ ಸ್ವಾಮೀಜಿಗಳ ಜೊತೆಗೆ ಚರ್ಚಿಸಿ ಅವರಿಗೆ ಇರುವ ಊಹಾಪೋಹಗಳನ್ನು ಸರಿಪಡಿಸಿದ್ದೇವೆ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಪಠ್ಯದಲ್ಲಿ ಹೆಡ್ಗೇವಾರ್ ಭಾಷಣದ ವಿಷಯವನ್ನು ಕೈಬಿಡುವುದಿಲ್ಲ, ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು. ಮಂದಿರ ಮಸೀದಿ ವಿವಾದ ವಿಚಾರದ ಪ್ರಶ್ನೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು. ಈ ವೇಳೆ ಸಚಿವರಾದ ಬಿಸಿ ಪಾಟೀಲ್, ಭೈರತಿ ಬಸವರಾಜ, ಶಾಸಕಿ ಪೂರ್ಣಿಮಾ ಇದ್ದರು. ಇದನ್ನೂ ಓದಿ: ನಾನು ಐಐಟಿ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ