ಉಡುಪಿ: ನಾನು ಮಾತನಾಡುವುದಿಲ್ಲ ನನ್ನ ಆಕ್ಷನ್ ಮಾತನಾಡುತ್ತದೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಸಿಎಂ ಮೌನಿಯಾಗಿದ್ದಾರೆ. ನಾಲಗೆ ಕಳೆದುಕೊಂಡಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಏನು ಕ್ರಮ ಕೈಗೊಳ್ಳಬೇಕು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್ವೈ
ನಿಮ್ಮ ಆಡಳಿತದ ಅವಧಿಯಲ್ಲಿ ಕರ್ತವ್ಯಪ್ರಜ್ಞೆ ಎಲ್ಲಿತ್ತು ನಿಮ್ಮಿಂದ ಪಾಠ ಕಲಿಯಬೇಕಾದ್ದು ನಾವು ಏನು ಇಲ್ಲ. ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ ನಮ್ಮ ರಾಜ್ಯದ ಪ್ರಗತಿ ಹೇಗೆ ಮಾಡುವುದೆಂದು ನಮಗೆ ಗೊತ್ತಿದೆ. ನಾವು ಕೆಲಸ ಮಾಡುತ್ತಿದ್ದೇವೆ. ಇನ್ನೂ ಕೆಲಸ ಮಾಡಿ ತೋರಿಸುತ್ತೇವೆ. ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳು ಆದವು. ಹಿಂದೂ ಕಾರ್ಯಕರ್ತರ ಕೊಲೆ ಆಯ್ತು. ಕೊಲೆ ಮಾಡಿದವರ ಕೇಸನ್ನೇ ವಿದ್ ಡ್ರಾ ಮಾಡಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ದರಾ?. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಲಿ. ನಾವು ಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ. ಕಾನೂನಿನ ಮುಂದೆ ಎಲ್ಲರೂ ಸಮಾನ. ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ
ಸದ್ಯ ರಾಜ್ಯದಲ್ಲಿ ನಡೆಯಲಿರುವ ಧರ್ಮ ಸಂಘರ್ಷ ಕುರಿತು ಪ್ರತಿಕ್ರಿಯಿಸಿ, ಅವರವರ ವಿಚಾರ ಪ್ರಚಾರ ಮಾಡಲು ಏನೂ ತೊಂದರೆ ಇಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹಿಂಸೆಗೆ ಇಳಿದರೆ ಸರ್ಕಾರ ಸಹಿಸುವುದಿಲ್ಲ ಈ ಸ್ಪಷ್ಟ ಸಂದೇಶ ಈಗಾಗಲೇ ಕಳುಹಿಸಿದ್ದೇನೆ. ಹಿಜಬ್ ವಿಚಾರ ದಲ್ಲಿ ಕೋರ್ಟ್ ಆದೇಶ ಇದೆ. ಕೋರ್ಟ್ ಆದೇಶ ರಾಜ್ಯದಲ್ಲಿ ಪಾಲನೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಹಿಂದೂ ಟಾಸ್ಕ್ ಫೋರ್ಸ್ ಪರ ಬೊಮ್ಮಾಯಿ ಬ್ಯಾಟಿಂಗ್:
ಮಂಗಳೂಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೆ ಹಿಂದೂ ಟಾಸ್ಕ್ ಫೋರ್ಸ್ ಆರಂಭಿಸಿರುವ ವಿಚಾರದ ಕುರಿತು ಮಾತನಾಡಿ, ಯಾರೆಲ್ಲಾ ಅವರವರ ರಕ್ಷಣೆ ಮಾಡಿಕೊಳ್ಳಬೇಕೋ ಮಾಡಿಕೊಳ್ಳುತ್ತಾರೆ. ಎಲ್ಲದಕ್ಕೂ ಕಾನೂನು ಇದೆ. ಇಷ್ಟೆಲ್ಲಾ ಘಟನೆ ನಡೆದಿವೆ. ನಡೆದಿರುವ ಎಲ್ಲಾ ಘಟನೆಗಳಿಗೂ ಕಾನೂನು ಇದೆ. ಇದರ ಅರಿವು ಜನರಿಗೆ ಇದ್ದರೆ ಉತ್ತಮ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರ್ಕಾರವೇ ಮಾಡಿದೆ. ನಾವೇನು ಹೊಸದಾಗಿ ಕಾನೂನು ಮಾಡಿಲ್ಲ. ಹಿಂದಿನ ಸರ್ಕಾರಗಳು ಮಾಡಿದ ಕಾನೂನು ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎಂದು ವ್ಯಾಪಾರ ಬಹಿಷ್ಕಾರ ಮತ್ತಿತರ ಬೆಳವಣಿಗೆಗಳಿಗೆ ಸಿಎಂ ಉತ್ತರ ನೀಡಿದ್ದಾರೆ.