ರಾಮನಗರ: ಬಂಡೆ ಮಠದ ಶ್ರೀ (BandeMutt Shree) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರ ವಶದಲ್ಲಿರುವ ಮೂವರು ಆರೋಪಿಗಳನ್ನೂ ಎರಡು ದಿನಗಳಿಂದ ನಿರಂತರ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳ ಮೊಬೈಲ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ (FSL) ಗೆ ಕಳಹಿಸಲಾಗಿದ್ದು, ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿರುವ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿ (Sacchidanand Murthy) ಯನ್ನೂ ಸಹ ವಿಚಾರಣೆ ನಡೆಸಲಾಗಿದೆ.
ಬಸವಲಿಂಗ ಶ್ರೀಗಳ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿರೋ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿಗೆ ಮಾಗಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಡೆತ್ ನೋಟ್ ನಲ್ಲಿ ಸಚ್ಚಿದಾನಂದ ಮೂರ್ತಿ ಕೂಡಾ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು ಎಂಬ ಅಂಶ ಹೊರಬಂದ ಹಿನ್ನೆಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅ.28ರಂದೇ ನೋಟಿಸ್ ನೀಡಿದ್ರು. ಮುಂದುವರಿದ ಭಾಗವಾಗಿ ನಿನ್ನೆ ಸಚ್ಚಿದಾನಂದ ಮೂರ್ತಿ ಮಾಗಡಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಕಸ್ಟಡಿಯಲ್ಲಿರೋ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯನ ಮೊಬೈಲ್ ಗಳನ್ನ ಎಫ್ಎಸ್ಎಲ್ ತನಿಖೆಗೆ ಒಳಪಡಿಸಿರೋ ಪೊಲೀಸರು. ಟೆಕ್ನಿಕಲ್ ಎವಿಡೆನ್ಸ್ ಗಳ ಮೇಲೆ ಗಮನಹರಿಸಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೊಗಳನ್ನೇ ಆಧಾರವಾಗಿ ಇರಿಸಿಕೊಂಡು ಅದನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ್ ಹುಡುಕಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – ಜೆಡಿಎಸ್ ಶಾಸಕರ ಆಗ್ರಹ
ಆರೋಪಿಗಳ ಮೊಬೈಲ್ಗಳು ಪೊಲೀಸರ ಕೈಗೆ ಬರುವ ಹೊತ್ತಿಗೆ ಅವುಗಳಲ್ಲಿದ್ದ ಬಹುತೇಕ ಎಲ್ಲ ಮಾಹಿತಿ ಡಿಲೀಟ್ ಮಾಡಲಾಗಿದ್ದು, ವಾಟ್ಸಪ್ ಚಾಟ್ಗಳನ್ನೂ ಕ್ಲಿಯರ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಸ್ಟಡಿಯಲ್ಲಿರೋ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಆರೋಪಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ಬಳಿಕ ಮೂವರು ಆರೋಪಿಗಳನ್ನು ಕರೆದೊಯ್ದು ಹನಿಟ್ರ್ಯಾಪ್ ಗೆ ಪ್ಲಾನ್ ಮಾಡಿರುವ ಕಣ್ಣೂರು ಮಠದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವನ್ನ ಬೇಧಿಸಿದ್ದಷ್ಟೂ ತಿರುವುಗಳು ಹೆಚ್ಚಾಗುತ್ತಿವೆ. ಇನ್ನು ಎರಡು ದಿನ ಆರೋಪಿಗಳನ್ನ ಕಸ್ಟಡಿಯಲ್ಲಿಟ್ಟುಕೊಳ್ಳಲಿರೋ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿ ಆರೋಪಿಗಳ ಬಾಯ್ಬಿಡಿಸ್ತಾರಾ ಕಾದುನೋಡಬೇಕಿದೆ.